ಮೂಡುಬಿದಿರೆ: ಯಾವುದೇ ಜನಪ್ರತಿನಿಧಿಗಳ ಸಹಾಯವನ್ನು ಅಪೇಕ್ಷಿಸದೆ, ಸರ್ಕಾರ ಅನುದಾನವನ್ನೂ ಉಪಯೋಗಿಸದೆ ಗ್ರಾಮಸ್ಥರೇ ಸೇರಿ ಒಗ್ಗಟ್ಟಿನಿಂದ ಶ್ರಮವಹಿಸಿದರೆ ಬೆಟ್ಟದಂತಹ ಸಮಸ್ಯೆಯನ್ನು ಕೂಡಾ ಸುಲಭದಲ್ಲಿ ಪರಿಹರಿಸಿ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬುದನ್ನು ಮೂಡುಬಿದಿರೆ ಹೋಬಳಿಯ ಹೊಸಬೆಟ್ಟು ಗ್ರಾಮದ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ.

ಇಲ್ಲಿನ ಹೊಸಬೆಟ್ಟು ಗ್ರಾಮದ ಶೇಡಿಗುರಿಬಳಿಯ ಗುಡ್ಡದಲ್ಲಿ ಹುಟ್ಟುವ ಜಲಧಾರೆಯೊಂದು ಮುಂದೆ ತೋಡು ಆಗಿ ಪರಿವರ್ತನೆಗೊಂಡು ಗ್ರಾಮದ ಮಧ್ಯಭಾಗದಲ್ಲಿ ಹರಿಯುತ್ತಾ ಟೆಲ್ಲಿಸ್ ನಗರ ಮೂಲಕ ಹಾದು ಪುಚ್ಚಮೊಗರು ಗ್ರಾಮದಲ್ಲಿ ಫಲ್ಗುಣಿ ನದಿಯನ್ನು ಸೇರುತ್ತದೆ. ಈ ಜಲಧಾರೆ ಹೊಸಬೆಟ್ಟು ಗ್ರಾಮಸ್ಥರ ಮೂಲ ಜೀವಜಲವಾಗಿದೆ. ಶೇ.90ಕ್ಕೂ ಹೆಚ್ಚು ಕೃಷಿಕರಿಂದಲೇ ತುಂಬಿರುವ ಹೊಸಬೆಟ್ಟು ಗ್ರಾಮಕ್ಕೆ ಬೇರೆ ನೀರಿನ ಆಸರೆ ಇಲ್ಲ. ಈ ಜೀವಜಲದ ಮಹತ್ವವನ್ನು ತಿಳಿದು 2006-07ನೇ ಸಾಲಿನಲ್ಲಿ ರಾಷ್ಟ್ರೀಯ ಜಲಾನಯನ ಯೋಜನೆಯಡಿಯಲ್ಲಿ ಈ ತೋಡಿಗೆ ಅಡ್ಡಲಾಗಿ ಕೆಲವು ಕಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಟೆಲ್ಲಿಸ್ ನಗರ ಬಳಿಯ ಬೋರಹಿತ್ಲು ಮತ್ತು ಹೊಸಬೆಟ್ಟು-ಪುಚ್ಚಮೊಗರು ಗಡಿಭಾಗದಲ್ಲಿರುವ ಮೆಂಡೋನ್ಸರ ಕೋಡಿ ಕಿಂಡಿ ಅಣೆಕಟ್ಟುಗಳೂ ಸೇರಿವೆ.
ಆದರೆ ಜಲಾನಯನ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾದ ಈ ಅಣೆಕಟ್ಟುಗಳು ಕಳಪೆ ಕಾಮಗಾರಿಯ ಕಾರಣದಿಂದ ಹೆಚ್ಚುಕಾಲ ಬಾಳಲಿಲ್ಲ. ನಿರ್ಮಾಣವಾದ ಒಂದೇ ವರ್ಷಕ್ಕೆ ಮಧ್ಯದ ಪಿಲ್ಲರ್ ಬಿಟ್ಟರೆ ಉಳಿದ ಭಾಗವೆಲ್ಲಾ ನೀರು ಪಾಲಾಗಿತ್ತು. ಇದರ ಪರಿಣಾಮವಾಗಿ ಕಳೆದ ಒಂದು ದಶಕದಿಂದ ಇಲ್ಲಿನ ಕೃಷಿ ಆಧಾರಿತ ಕುಟುಂಬಗಳು ನೀರಿಗಾಗಿ ಬಹಳಷ್ಟು ಬವಣೆ ಪಡುವಂತಾಗಿತ್ತು. ಜನರ ಬವಣೆಯನ್ನು ಅರಿತ ಇಲ್ಲಿನ ಚರ್ಚ್ ಧರ್ಮಗುರುಗಳಾದ ವಂ| ಸಂತೋಷ್ ರೋಡ್ರಿಗಸ್ ಅವರು ಸೂಕ್ತ ಮಾರ್ಗದರ್ಶನದ ಮೂಲಕ ಇಲ್ಲಿನ ರೈತಾಪಿ ಕುಟುಂಬಗಳಲ್ಲಿ ಆತ್ಮವಿಶ್ವಾಸ ಭರಿಸುವ ಕೆಲಸ ಮಾಡಿದರು.

ಚರ್ಚ್ ಧರ್ಮಗುರುಗಳ ಮಾರ್ಗದರ್ಶನದಲ್ಲಿ, ಕಥೊಲಿಕ್ ಸಭಾ ಹೊಸಬೆಟ್ಟು ಘಟಕದ ಮುಂದಾಳತ್ವದಲ್ಲಿ ಹೊಸಬೆಟ್ಟು ಗ್ರಾಮದ 25ಕ್ಕೂ ಹೆಚ್ಚು ಮಂದಿ ಒಟ್ಟು ಸೇರಿ ಊರಿನ ಹಿತಕ್ಕಾಗಿ ಶ್ರಮದಾನದ ಮಾಡುವ ಕೆಲಸ ಕೈಗೊಂಡರು. ಕಥೊಲಿಕ್ ಸಭಾದ ಅಧ್ಯಕ್ಷ ವಿನ್ಸೆಂಟ್ ಸಾಂತ್ಮಯರ್ ಅವರ ನೇತ್ರತ್ವದಲ್ಲಿ ಒಗ್ಗಟ್ಟಾದ ಸ್ಥಳೀಯ ಶ್ರಮಿಕರು ಎರಡು ದಿನಗಳ ಶ್ರಮದಾನದ ಮೂಲಕ ಟೆಲ್ಲಿಸ್ ನಗರದ ಬೋರಹಿತ್ಲು ಕಿಂಡಿ ಅಣೆಕಟ್ಟು ಮತ್ತು ಹೊಸಬೆಟ್ಟು-ಪುಚ್ಚಮೊಗರು ಗ್ರಾಮಗಳ ಗಡಿಭಾಗದ ಮೆಂಡೋನ್ಸರ ಕೋಡಿಯಲ್ಲಿ ಕಿಂಡಿ ಅಣೆಕಟ್ಟುಗಳಿದ್ದ ಜಾಗದಲ್ಲಿ ಅಣೆಕಟ್ಟಿನ ಅಳೆದುಳಿದ ಪಳೆಯುಳಿಕೆಗಳನ್ನು ಬಳಸಿಕೊಂಡು ತಾತ್ಕಾಲಿಕ ಕಟ್ಟವನ್ನು ನಿರ್ಮಿಸುವ ಮೂಲಕ ಹೊಸಬೆಟ್ಟು ಗ್ರಾಮಕ್ಕೆ ಜೀವಜಲವನ್ನು ತುಂಬಿಸಿಕೊಟ್ಟಿದ್ದಾರೆ. ಗಟ್ಟಿಮುಟ್ಟಾದ ಅಡಿಕೆ ಮರವನ್ನು ಎರಡು ಭಾಗವಾಗಿ ಸೀಳಿ ಆ ಸಲಾಕೆ ಮತ್ತು ಮಣ್ಣನ್ನು ಉಪಯೋಗಿಸಿ ಈ ನೀರಿನ ಕಟ್ಟಗಳನ್ನು ನಿರ್ಮಿಸಲಾಗಿದೆ. ಸುಮಾರು 8 ಅಡಿ ಆಳ ಮತ್ತು 25 ಅಡಿ ಅಗಲವಿರುವ ಈ ತೋಡಿನಲ್ಲಿ ಇದೀಗ ಟೆಲ್ಲಿಸ್ ನಗರ ಬಳಿ ಸುಮಾರು 800 ಮೀಟರ್ ಉದ್ದಕ್ಕೆ ನೀರು ಶೇಖರಣೆಯಾಗಿದೆ.
ಹೊಸಬೆಟ್ಟು-ಪುಚ್ಚಮೊಗರು ಗಡಿ ಭಾಗದಲ್ಲೂ ಸುಮಾರು 500 ಮೀಟರ್ ಉದ್ದಕ್ಕೆ ತೋಡಿನಲ್ಲಿ ನೀರಿನ ಶೇಖರಣೆಯಾಗಿದೆ. ಇಷ್ಟರಲ್ಲೇ ಬತ್ತಿ ಹೋಗಬೇಕಾಗಿದ್ದ ಈ ಪರಿಸರದ ಬಾವಿಗಳು ಮತ್ತು ಕೆರೆಗಳಿಗೆ ಅಂತರ್ಜಲದ ಮೂಲಕ ನೀರಿನ ಮರುಪೂರಣವಾಗಿದ್ದು ಇಲ್ಲಿನ ಬಾವಿಗಳು ತುಂಬಿ ತುಳುಕುತ್ತಿದೆ. ಅಭಿವೃದ್ಧಿಗಾಗಿ ಶ್ರಮದಾನ ಮಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಅಂಶವನ್ನು ಸಾರಿರುವ ಕಥೊಲಿಕ್ ಸಭಾ ಹೊಸಬೆಟ್ಟು ಘಟಕದ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.


