ಮೂಡುಬಿದಿರೆ: ಅಶಕ್ತ ಯಕ್ಷಗಾನ ಕಲಾವಿದರನ್ನು ಗುರುತಿಸಿ ನೆರವು ನೀಡುವುದೇ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಧ್ಯೇಯವಾಗಿದೆ. ಮೂರು ವರ್ಷಗಳಲ್ಲಿ 3.50 ಕೋಟಿ ಆರ್ಥಿಕ ನೆರವು ನೀಡಲಾಗಿದ್ದು, ಆಶಕ್ತ ಕಲಾವಿದರಿಗೆ ಗುರುತಿಸಿ ಅವರ ಸಮಸ್ಯೆಗಳಿಗೆ ದನಿಯಾಗಿಸೋಣ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಇಲ್ಲಿನ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಮೂಡುಬಿದಿರೆ ಘಟಕದ ತೃತಿಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ, ಈ ಸಂಸ್ಥೆಯು ಜನಪರ ಕೆಲಸ ಮಾಡುವ ಮೂಲಕ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಇದೇ ವೇಳೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅನಂತರಾವ್ ಭಟ್ ಕಲ್ಲಮುಂಡ್ಕೂರು ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಮುರಳೀಧರ ಶೆಟ್ಟಿ,ಪುರುಷೋತ್ತಮ ಭಂಡಾರಿ, ಮೂಡುಬಿದಿರೆ ಘಟಕದ ಉಪಾಧ್ಯಕ್ಷರುಗಳಾದ ದಿವಾಕರ ಶೆಟ್ಟಿ ತೋಡಾರು, ಸುಭಾಶ್ಚಂದ್ರ ಚೌಟ, ಪ್ರದಾನ ಸಂಚಾಲಕರಾದ ಎಂ.ದೇವಾನಂದ ಭಟ್ ಬೆಳುವಾಯಿ, ಪ್ರೇಮನಾಥ ಮಾರ್ಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೋಡಾರು ದಿವಾಕರ ಶೆಟ್ಟಿ ನಿರ್ವಹಿಸಿದರು. ಕಾರ್ಯದರ್ಶಿ ಎಸ್ ಸದಾಶಿವ ರಾವ್ ನೆಲ್ಲಿಮಾರ್ ವಂದಿಸಿದರು. ಬಳಿಕ ಯಕ್ಷ-ಗಾನ ವೈಭವ ನಡೆಯಿತು. ಹನುಮಗಿರಿ ಮೇಳದವರಿಂದ ‘ಮಾಯಾ ವಿಹಾರಿ’ ಯಕ್ಷಗಾನ ನಡೆಯಿತು.
