ಮೂಡುಬಿದಿರೆ: ದಿನದಿಂದ ದಿನಕ್ಕೆ ತಾಂತ್ರಿಕತೆ ವೇಗವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ತಾಂತ್ರಿಕ ಶಿಕ್ಷಣ ಪಡೆದುಕೊಂಡರಷ್ಟೇ ಸಾಲದು, ಅದರೊಂದಿಗೆ ತಾಂತ್ರಿಕ ಕೌಶಲ್ಯಗಳನ್ನೂ ರೂಢಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಆಗ ಮಾತ್ರ ಸ್ಪರ್ಧಾತ್ಮಕ ವೃತ್ತಿಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಶ್ರೀ ಮಹಾವೀರ ಕಾಲೇಜು ಆವರಣದಲ್ಲಿರುವ ಎ.ಜಿ. ಸೋನ್ಸ್ ಐ.ಟಿ.ಐ. ಸಭಾಂಗಣದಲ್ಲಿ ಐ.ಟಿ.ಐ. ಮತ್ತು ಮೂಡುಬಿದಿರೆ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ವಿಭಾಗಗಳಲ್ಲಿ ಬುಧವಾರ ಏರ್ಪಡಿಸಲಾದ ತಾಂತ್ರಿಕ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಣಿಪಾಲದ ಸಿಂಡ್ ಆರ್ಸೆಟ್ನ ನಿರ್ದೇಶಕ ಮಂಜುನಾಥ ನಾಯಕ್ ಸ್ವದ್ಯೋಗದ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಮೂಡುಬಿದಿರೆ ರೋಟರಿ ಅಧ್ಯಕ್ಷ ಡಾ.ರಮೇಶ್, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಭಾಗವಹಿಸಿದ್ದರು. ಶ್ರೀಮಹಾವೀರ ಕಾಲೇಜು ಆಡಳಿತ ಮಂಡಳಿ ಸದಸ್ಯ ಸಿ.ಎಚ್. ಅಬ್ದುಲ್ ಗಫೂರ್, ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಎಚ್. ಸಿ. ದೀಕ್ಷಿತ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೋ.ಎಂ. ರಮೇಶ ಭಟ್, ಎಸ್.ಎನ್.ಎಂ. ಪಾಲಿಟೆಕ್ನಿಕ್ ಪ್ರಾಚಾರ್ಯ ಜೆ.ಜೆ. ಪಿಂಟೋ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾರತ್ ಅಟೋಕಾರ್ಸ್ನ ಸೀನಿಯರ್ ಟೆಕ್ನೀಶಿಯನ್ ರವಿ ನಾಯಕ್ (ಆಟೋಮೊಬೈಲ್), ತನ್ಮಯ್ ಟೆಕ್ನೋಲಜಿಯ ಪ್ರದೀಪ್ ಕುಮಾರ್ (ಇಲೆಕ್ಟ್ರಾನಿಕ್ಸ್), ಬಾಗಲಕೋಟೆಯ ವಿರೂಪಾಕ್ಷ (ಇಲೆಕ್ಟ್ರಿಕಲ್)ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಐ.ಟಿ.ಐ.ಯ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
