ಕೈಕಂಬ :ಭರತನಾಟ್ಯದ ಮೂಲಕ ಮನಸ್ಸು, ಬುದ್ಧಿ, ಏಕಾಗ್ರತೆ ಸಾಧ್ಯ. ನಾಟ್ಯದಲ್ಲಿ ಭಗವಂತನ ಚಿಂತನೆಯೂ ಅಡಕವಾಗಿದೆ. ಪಾಶ್ಚಾತ್ಯ ಸಂಗೀತ-ನಾಟ್ಯ ಕಲೆಗಳಿಗೆ ಅರ್ಥವೇ ಇಲ್ಲ. ನವರಸವಿಲ್ಲದ ಪಾಶ್ಚಾತ್ಯ ನಾಟ್ಯಗಳಲ್ಲಿ ಕುಣಿಯುವುದು, ಕುಪ್ಪಳಿವುದು ಬಿಟ್ಟರೆ ಬೇರೇನೂ ಇಲ್ಲ. ಈಗ ಯುವಜನರಲ್ಲಿ ದೇಶೀಯ ಕಲೆಗಳ ಮೇಲಿನ ಆಸಕ್ತಿ ಕಡಿಮೆಯಾಗಿ ವಿದೇಶಿ ಸಂಗೀತ-ನಾಟ್ಯಗಳ ಅನುಕರಣೆ ಹೆಚ್ಚಾಗುತ್ತಿದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ನುಡಿದರು.
ಅವರು ಶನಿವಾರ ಗುರುಪುರ ಕೈಕಂಬ ಶ್ರೀ ಗಣೇಶಕಟ್ಟೆಯಲ್ಲಿಕಾಸರಗೋಡು ಇದರ ಕೈಕಂಬ ಶಾಖೆಯ ಪ್ರಥಮ ವಾರ್ಷಿಕೋತ್ಸವ `ಚಿಗುರು ಸಂಜೆ-2018′ ನೃತ್ಯ ವೈಭವ ಸಭಾಕಾರ್ಯಕ್ರಮದ ಆಶಿರ್ವಚನ ನೀಡಿ ಮಾತನಾಡಿದರು.
ರಮೇಶ್ ರಾವ್ ಕೈಕಂಬ ಮಾತನಾಡಿ ನಾಟ್ಯಕಲೆ ಮನಸ್ಸು ಅರಳಿಸುತ್ತದೆ. ಇದರಲ್ಲಿ ಆಧ್ಯಾತ್ಮಿಕ ಶಕ್ತಿ ಇದೆ. ಯುವಜನತೆಗೆ ನಮ್ಮ ಸಂಸ್ಕøತಿಯ ಕಲೆಗಳ ಪರಿಚಯ ಮಾಡಬೇಕು. ರಾಷ್ಟ್ರೀಯ ಚಾನೆಲುಗಳ ಹೊರತಾಗಿ ಇತರ ಮಾಧ್ಯಮಗಳಲ್ಲಿ ಭರತನಾಟ್ಯಕ್ಕೆ ಆದ್ಯತೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಕೀಲ ವಿಜಯ ಗೌಡ ಶಿಬ್ರಿಕರೆ ಮಾತನಾಡುತ್ತ, ನಮ್ಮಲ್ಲಿಂದು ದೇಶೀಯ ಕಲೆಗಳ ಜಾಗದಲ್ಲಿ ಪಾಶ್ಚಾತ್ಯ ಕಲೆಗಳು ಆವರಿಸಿವೆ. ಸಿನೆಮಾ ಸಂಗೀತ-ನೃತ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಭಾರತೀಯ ಕಲೆಗಳು ಮನಸ್ಸು ಅರಳಿಸಿದರೆ ಪಾಶ್ಚಾತ್ಯ ಕಲೆಗಳು ಮನಸ್ಸನ್ನು ಕೆರಳಿಸುತ್ತಿವೆ ಎಂದರು.
ನೃತ್ಯಂ ಕಾಸರಗೋಡು ನಿರ್ದೇಶಕಿ ಲತಾ ಶಶಿಧರನ್ ಮಾತನಾಡುತ್ತ, ಸಾಂಪ್ರದಾಯಿಕ ಶಾಸ್ತ್ರೀಯ ಕಲೆಯಾಗಿರುವ ಭರತನಾಟ್ಯಂಗೆ ದೈವದತ್ತವಾದ ಹಿನ್ನೆಲೆ ಇದೆ. ಇದನ್ನು ಪಂಚಮವೇದ ಅಥವಾ ನಾಟ್ಯವೇದ ಎಂದು ಕರೆಯುತ್ತಾರೆ. ಮೂರು ವರ್ಷಗಳ ಹಿಂದೆ ಆರಂಭಗೊಂಡಿರುವ ಕೈಕಂಬ ಶಾಖೆಯಲ್ಲಿ ಪ್ರಾರಂಭದಲ್ಲಿ 17 ಮಕ್ಕಳಿದ್ದರೆ, ಈಗ 60 ಮಕ್ಕಳಿದ್ದಾರೆ. ಪೋಷಕರ ಬೆಂಬಲ, ಸಹಕಾರ ಸಿಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶ್ರೀರಾಮ್ ಹೋಟೆಲ್ ಮಾಲಕ ಎಂ ಹರಿರಾವ್ ವಹಿಸಿದ್ದರು.ಅಶಿತ್ ಎಂಟರ್ ಪ್ರೈಸಸ್ ಮಾಲಕ ಕೈಕಂಬ ರಾಜೀವ ಕೆ ಉಪಸ್ಥಿತರಿದ್ದರು. ಶಾರದ ಶ್ರೀನಿವಾಸ ಸ್ವಾಗತಿಸಿ ನೃತ್ಯ ನಿರ್ದೇಶಕರಾದ ಲತಾ ಶಶಿಧರನ್ ಪ್ರಸ್ತಾವಿಸಿದರು .ವಾದಿರಾಯ ಕಲ್ಲೂರಾಯ ಹಾಗೂ ಅಶ್ವಿನಿ ಕಾಮತ್ ನಿರೂಪಿಸಿದರು.ಲವೀಣ ವಂದಿಸಿದರು.
ನಂತರ ಕಾಸರಗೋಡು ಲತಾಶಶಿಧರನ್ ಅವರ ಶಿಷ್ಯವೃಂದದವರಿಂದ ನೃತ್ಯ ವೈವಿಧ್ಯ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಲತಾ ಶಶಿಧರನ್ ಶಿಷ್ಯವೃಂದದಿಂದ ನೃತ್ಯ ವೈವಿಧ್ಯ ನಡೆಯಿತು. ಹಾಡುಗಾರಿಕೆಯಲ್ಲಿ ಟಿ. ಎಂ ಅವನೀಂದ್ರ, ಕೊಳಲು ವಾದನದಲ್ಲಿ ಸುರೇಂದ್ರ ಆಚಾರ್ಯ, ಮೃದಂಗದಲ್ಲಿ ಶ್ರೀಧರ್ ರೈ, ವಾಯೊಲಿನ್ನಲ್ಲಿ ನಟರಾಜ ಕಲ್ಲೂರಾಯ ಸಹಕರಿಸಿದರು.


