ಬಂಟ್ವಾಳ : ಸಂವಿಧಾನವು ರಾಷ್ಟ್ರವನ್ನಾಳುವ ಪರಮೋಚ್ಛ ಕಾನೂನು. ದೇಶದ ಪ್ರತಿಯೊಂದು ಜಾತಿ, ಧರ್ಮಗಳನ್ನೊಳಗೊಂಡು ಎಲ್ಲರಿಗೂ ಸಂವಿಧಾನ ಮಹತ್ವವಾದುದು ಎಂದು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮಹಮ್ಮದ್ ಇಮ್ತಿಯಾಜ್ ಅಹಮದ್ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ವಿ.ಎಸ್. ಪ.ಪೂ.ಕಾಲೇಜು, ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಬಂಟ್ವಾಳ ವಕೀಲರ ಸಂಘ (ರಿ) ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಬಹುಭಾಷೆ, ಬಹುಸಂಸ್ಕೃತಿಯ ಭಾರತ ದೇಶವು ಬೃಹತ್ತಾದ ಸಂವಿಧಾನವನ್ನು ಹೊಂದಿದೆ. ಕಾನೂನಿನ ಮುಂದೆ ಇಲ್ಲರೂ ಸಮಾನರಾಗಿದ್ದಾರೆ. ಸಂವಿಧಾನದ ದಿನದ ಮೂಲಕ ಅದರ ಮಹತ್ವವನ್ನು ತಿಳಿದುಕೊಳ್ಳುವುದರ ಜತೆ ನೀತಿ ನಿಯಮಾವಳಿಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಬಂಟ್ವಾಳ ವಕೀಲ ಚಂದರಶೇೀಖರ ರಾವ್ ಪುಂಚಮೆ ಮಾತನಾಡಿ, ಬ್ರಿಟಿಷ್ ಕಾಲದಲ್ಲಿ ಇದ್ದ ಕೆಲವೊಂದು ಕಾನೂನುಗಳನ್ನು ಸಂವಿಧಾನವು ಉಳಿಸಿಕೊಂಡಿದೆ. ಅನೇಕ ಕಾನೂನುಗಳನ್ನು ಕಾಲ ಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳಲಾಗಿದೆ. ಆಯಾ ರಾಜ್ಯಗಳಲ್ಲಿ ಸಂವಿಧಾನದ ಚೌಕಟ್ಟಿಗೆ ಪೂರಕವಾಗಿ ಹೊಸಹೊಸ ಕಾನೂನುಗಳು ಬಂದಿವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಜನತಂತ್ರ ವ್ಯವಸ್ಥೆಯ ಪವಿತ್ರಗ್ರಂಥ ಸಂವಿಧಾನವನ್ನು ಅನುಷ್ಠಾನಗೊಳಿಸಿದ ದಿನ. ಸಂವಿಧಾನದ ಪಾವಿತ್ರತೆಯನ್ನು ರಕ್ಷಿಸುವುದು ಭಾರತದ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಎಸ್.ವಿ.ಎಸ್. ಪ.ಪೂ.ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿ ಭಾರತದಲ್ಲಿ ಎಲ್ಲ ಜಾತಿ, ಧರ್ಮದ ವ್ಯಕ್ತಿಗಳು ಕೂಡ ಸಮಾನವಾಗಿ ಬದುಕುವುದಕ್ಕೆ ನಮ್ಮ ಸಂವಿಧಾನವೇ ಕಾರಣ. ಒಂದೇ ಧರ್ಮಗಳಿರುವ ಇತರ ದೇಶಗಳಲ್ಲೂ ಇಂತಹ ಸಮಾನತೆ ಕಾಣುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ನಾವು ಸಂವಿಧಾನಕ್ಕೆ ವಿಶೇಷ ಗೌರವ ಕೊಡುವುದು ಆದ್ಯ ಕರ್ತವ್ಯ ಎಂದರು.
ವೇದಿಕೆಯಲ್ಲಿ ಬಂಟ್ವಾಳ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರತಿಭಾ ಡಿ.ಎಸ್., ವಕೀಲರಾದ ಸತೀಶ್ ಬಿ., ಶ್ರೀಧರ್ ಪೈ., ವಿನೋದ, ಆಶಾಮಣಿ ಮತ್ತು ಸಕೀನಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಹನಾ ಜೆ. ಪಿ. ಮತ್ತು ಶಾಲ್ಮಲಿ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಸ್ವಾಗತಿಸಿ, ವಂದನೆಗೈದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
