ಮೂಡುಬಿದಿರೆ : ತೆಂಕಮಿಜಾರು “ಮಕ್ಕಳ ಗ್ರಾಮಸಭೆ” ಸಂತೆಕಟ್ಟೆಯ ಸಭಾಂಗಣದಲ್ಲಿ ನೆರವೇರಿತು. ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲ್ಲಮುಂಡ್ಕೂರು ವಲಯದ ಮೇಲ್ವೀಚಾರಕಿ ಭಾರತಿ ಅವರು ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡುವಾಗ “ಮಕ್ಕಳೇ ನೀವು ಶಿಕ್ಷಣವನ್ನು ಪಡೆದು ಮುಂದೆ ಏನಾಗುತ್ತೀರಿ?” ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಿದಾಗ ಕೆಲವು ಮಕ್ಕಳು ನಾನು ಪೊಲೀಸ್ ಆಗುತ್ತೇನೆ, ಡಾಕ್ಟರ್, ಎಂಜಿನಿಯರ್ ಆಗುತ್ತೇನೆಂಬ ಉತ್ತರಗಳನ್ನು ನೀಡಿದರು. ಆದರೆ ನೀರ್ಕೆರೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸುಖೇಶ್ ಎಂಬಾತ ನನಗೆ ಸೋಲ್ಜರ್ ಆಗಬೇಕೆಂದು ಇನ್ನು ಕೆಲವು ವಿದ್ಯಾರ್ಥಿಗಳು ದೇಶದ ಪ್ರಧಾನಿಯಾಗುವಾಸೆಯಿದೆ ಎಂದು ತಿಳಿಸಿದಾಗ ಸಭಾಂಗಣದಲ್ಲಿ ಎಲ್ಲರೂ ಚಪ್ಪಾಳೆಯನ್ನು ತಟ್ಟಿ ಪ್ರೋತ್ಸಾಹಿಸಿದರು.
ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮಕ್ಕಳ ಗ್ರಾಮಸಭೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಜೈನ ಪ್ರೌಢಶಾಲೆಯ ಶಿಕ್ಷಕ ವಿನಯಚಂದ್ರ ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, “ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ”ಯ ಬಗ್ಗೆ ಮಾತನಾಡಿ ವಿದ್ಯಾರ್ಥಿ ಜೀವನವೆನ್ನುವುದು ಅತ್ಯಮೂಲ್ಯವಾದುದು. ನಾವು ನಮ್ಮ ಕೆಲಸವನ್ನು ಕರ್ತವ್ಯವೆಂದು ಮಾಡಿದಾಗ ಜೀವನ ಪರಿಪೂರ್ಣವಾಗಲು ಸಾಧ್ಯ. ಶಾಲೆಯಲ್ಲಿ ದೊರೆಯುವ ಬೇರೆ ಬೇರೆ ಅವಕಾಶಗಳನ್ನು ಪಡೆದುಕೊಳ್ಳುವುದು ಕೂಡಾ ಹಕ್ಕು., 25% ಮೀಸಲಾತಿ ಪಡೆಯುವ ಅವಕಾಶ, ಮೀಸಲಾತಿಯ ಅಡಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಯಾವುದೇ ಮುಖ್ಯವಾಹಿನಿಯಲ್ಲಿ ತೊಂದರೆ ಬಾರದೆ ಹಾಗೂ ಉಳ್ಳ ವಿದ್ಯಾರ್ಥಿಗಳನ್ನು ಸಮಂಜನವಾಗಿ ನಿರ್ವಹಣೆ ಮಾಡುವ ಹಕ್ಕೂ ಇದೆ ಎಂದ ಅವರು ಮೌಲ್ಯಯುತವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಹಕ್ಕು ಕೂಡಾ ನೀವು ಪಡೆಯಲು ಸಾಧ್ಯವಿದೆ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿ ಚಂದ್ರಹಾಸ ರೈ ಮಾಹಿತಿ ನೀಡಿ ಮಕ್ಕಳಲ್ಲಿ ಶ್ರೀಮಂತ-ಬಡವನೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕು. ನಿಮಗೆ ಎಲ್ಲಿಯೂ ಹಿಂಸೆ, ಲೈಂಗಿಕ ಕಿರುಕುಳ ನೀಡುವಂತಿಲ್ಲ, ಶೋಷಣೆ ಮಾಡುವಂತಿಲ್ಲ. ಇಂತಹ ಘಟನೆಗಳು ನಡೆದಾಗ ಮೊದಲು ನಿಮ್ಮ ಹೆತ್ತವರಿಗೆ ಮಾಹಿತಿಯನ್ನು ನೀಡಿ ಅವರ ಮೂಲಕ ಠಾಣೆಗೆ ತಿಳಿಸಿ ಎಂದು ಹೇಳಿದರು.
ಪಶು ಇಲಾಖೆಯ ವೈದ್ಯಾಧಿಕಾರಿ ಗುರುನಾಥ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ತೆಂಕಮಿಜಾರು ಗ್ರಾ.ಪಂಚಾಯತ್ ವ್ಯಾಪ್ತಿಯ 2 ಕಿರಿಯ ಪ್ರಾಥಮಿಕ, 5 ಹಿರಿಯ ಮತ್ತು 2 ಪ್ರೌಢಶಾಲೆಗಳಿಗೆ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರತಿಭಾ ಕಾರಂಜಿಯಲ್ಲಿ ತಾ.ಪಂ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಯಶೋಧ, ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ದೇವಾಡಿಗ, ಜೆ.ಕೆ ಹಸನ್ ಸದಸ್ಯರಾದ ಲಕ್ಷ್ಮೀ, ಕರುಣಾಕರ ಶೆಟ್ಟಿ, ಉಮೇಶ್ ಶೆಟ್ಟಿ, ರುಕ್ಮಯ ಗೌಡ, ದಿನೇಶ್, ಶಶಿಕಾಂತ್ ಶೆಟ್ಟಿಗಾರ್, ವಾಣಿ ವಿಲಾಸ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಆದರ್ಶ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಕಾರ್ಯದರ್ಶಿ ಮಂಜಪ್ಪ ಸ್ವಾಗತಿಸಿದರು, ಆನಂದ್ ವಿವರ ನೀಡಿದರು. ಕ್ಲರ್ಕ್ ರಾಕೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


