ಬೆಂಗಳೂರು: ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಆತುರದ ಪ್ರಯತ್ನ ನಡೆಸಿರುವುದು ಬಹಿರಂಗವಾಗಿದೆ. ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ರಾಘವೇಶ್ವರ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಗಿರಿನಗರ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿತ್ತು.
ಸೋಮವಾರ ಬೆಳಗ್ಗೆ ಈ ಸಂಬಂಧ ಬೆಂಗಳೂರು ಅಧೀನ ನ್ಯಾಯಾಲಯದಲ್ಲಿ ಗಿರಿನಗರ ಪೊಲೀಸ್ ಠಾಣಾಧಿಕಾರಿಗಳು ಅರ್ಜಿ ಸಲ್ಲಿಸಿ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಅನುಮತಿ ಕೇಳಿದ್ದಾರೆ. ಆದರೆ ಈ ಅರ್ಜಿಯ ಬಗ್ಗೆ ಯಾವುದೇ ತೀರ್ಪು ನೀಡದೆ ಪರ್ಮಿಟೆಡ್ ಟು ಪುಟಪ್ ಎಂದು ನ್ಯಾಯಾಧೀಶರು ಸಹಿ ಮಾಡಿರುವುದನ್ನೇ ಪರ್ಮಿಟೆಡ್ ಎಂದು ವ್ಯಾಖ್ಯಾನಿಸಿ ಅತ್ಯಾಚಾರ ಪ್ರಕರಣ ದಾಖಲಿಸುವ ಆತುರದ ನಿರ್ಣಯ ಮಾಡಲಾಗಿದೆ.
ಇದಲ್ಲದೇ ಹೈಕೋರ್ಟ್ಗೂ ಇದೇ ರೀತಿಯ ತಪ್ಪು ಮಾಹಿತಿಯನ್ನು ಒದಗಿಸಲಾಗಿದೆ. ಈ ಮೂಲಕ ಪ್ರಕರಣವನ್ನು ತಿರುಚಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಮುಂದಾಗಿರುವುದು ಕಂಡುಬರುತ್ತದೆ. ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಮಧ್ಯ ಪ್ರವೇಶಿಸುತ್ತಿರುವುದು ವಿಚಾರಣೆಯಲ್ಲಿನ ಹಸ್ತಕ್ಷೇಪವನ್ನು ಪ್ರದರ್ಶಿಸುತ್ತಿದೆ. ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಶ್ರೀಮಠದ ವಕೀಲರು ಅಧೀನ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ತನಿಖೆಯನ್ನು ವಿಳಂಬ ಮಾಡುತ್ತ, ವ್ಯಾಪ್ತಿ ಮೀರಿ ಕಾನೂನು ಸುವ್ಯವಸ್ಥೆ ವಿಭಾಗದ ಮೂಲಕ ತನಿಖೆ ನಡೆಸಲು ಒತ್ತಡ ಹೇರಲಾಗುತ್ತಿದೆ ಎನ್ನುವುದು ಮಠದ ವಾದವಾಗಿದೆ.