ಸುದ್ದಿ9ಬಂಟ್ವಾಳ: ತಾಲ್ಲೂಕಿನ ಮುಲ್ಕಾಜೆಮಾಡ ಎಂಬಲ್ಲಿ ಅಪ್ರಾಪ್ತ ಯುವತಿಗೆ ಅತ್ಯಾಚಾರ ಎಸಗಿ ಬಳಿಕ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಆರೋಪಿಯನ್ನು ಚಿಕ್ಕಮಗಳೂರಿನ ದಾಸರಹಳ್ಳಿ ಗ್ರಾಮದ ಮಾವಿನಹಳ್ಳಿ ನಿವಾಸಿ ದೇವರಾಜ್ ಎಂದು ಗುರುತಿಸಲಾಗಿದೆ.
ಈತನು ಕಳೆದ ನಾಲ್ಕು ತಿಂಗಳ ಹಿಂದೆ ಇಲ್ಲಿನ ಮುಲ್ಕಾಜೆಮಾಡ ನಿವಾಸಿ ಬಾಳಪ್ಪ ಪೂಜಾರಿ ಎಂಬವರ ಪುತ್ರಿ 17ರ ಹರೆಯದ ಅಕ್ಷತಾಳೊಂದಿಗೆ ಮಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರ ಉತ್ಪನ್ನಗಳನ್ನು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ವೇಳೆ ಪ್ರೀತಿಸಿ ಆಕೆಯನ್ನು ವಿವಾಹವಾಗಿದ್ದನು ಎನ್ನಲಾಗಿದೆ. ಈ ನಡುವೆ ಚಿಕ್ಕಮಗಳೂರಿನ ಆತನ ಮನೆಯಿಂದ ಮುಲ್ಕಾಜೆಮಾಡ ತಾಯಿ ಮನೆಗೆ ಓಡಿ ಬಂದಿದ್ದ ಯುವತಿಯನ್ನು ಇತ್ತೀಚೆಗೆ ಹುಡುಕಿಕೊಂಡು ಬಂದಿದ್ದ ಆತನು ಚಾಕುವಿನಿಂದ ಆಕೆಯ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಿ ಬಳಿಕ ಪರಾರಿಯಾಗಿದ್ದನು ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಮಂಗಳೂರಿನ ಸಕರ್ಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಇದೀಗ ಪುಂಜಾಲಕಟ್ಟೆ ಠಾನಾಧಿಕಾರಿ ಲತೇಶ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿದ ಬಳಿಕ ಆತನ ವಿರುದ್ಧ ಯುವತಿ ಅಪಹರಣ, ಅತ್ಯಾಚಾರ, ಮತ್ತು ಕೊಲೆಯತ್ನ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿಸಿದ್ದಾರೆ.

—
