ಕೈಕಂಬ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬಿಟ್ಟು ಗಣೇಶನ ಕಟ್ಟೆಗೆ ಗುದ್ದಿದ್ದು, ಸುಮಾರು 15 ಮಂದಿ ಗಾಯಗೊಂಡ ಘಟನೆ ಗುರುಪುರ ಕೈಕಂಬ ಜಂಕ್ಷನ್ ಸಮೀಪ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಹುಕ್ರಟ್ಟೆ ಮೂಡಬಿದ್ರೆ ಮಾರ್ಗವಾಗಿ ಮಂಗಳೂರಿಗೆ ಸಾಗುವ ಜಯರಾಜ್ ಎನ್ನುವ ಎಕ್ಸ್ಪ್ರೆಸ್ ಬಸ್ ಗುರುಪುರ ಕೈಕಂಬದಲ್ಲಿ ಪ್ರಯಾಣಿಕರನ್ನು ಹತ್ತಿ ಇಳಿಸಿ ಮಂಗಳೂರಿನತ್ತ ತೆರಳುತ್ತಿತ್ತು. ಬಸ್ ಕೊಂಚ ದೂರ ಸಾಗುತ್ತಿದ್ದಂತೆ ಬಸ್ ಚಾಲಕ ಅಸೌಖ್ಯಗೊಂಡಿದ್ದು, ನಿಯಂತ್ರಣ ಕಳೆದುಕೊಂಡ ಬಸ್ ನೇರವಾಗಿ ಗಣಪತಿ ಪ್ರತಿಷ್ಠಾಪನೆಯ ಗಣೇಶ್ ಕಟ್ಟೆಗೆ ಗುದ್ದಿದೆ.
ಡಿಕ್ಕಿಯ ತೀವ್ರತೆಗೆ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಸುಮಾರು 15 ಮಂದಿ ಗಾಯಗೊಂಡಿದ್ದು, ಕೆಲವರು ಸ್ಥಳೀಯ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದುಕೊಂಡು ತೆರಳಿದ್ದು, ಉಳಿದವರು ಬಜಪೆಯ ಆಸ್ಪತ್ರೆಗೆ ತೆರಳಿದ್ದಾರೆ. ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪಿಸಲಿರುವ ಗಣೇಶ್ ಕಟ್ಟೆ ಸಂಪೂರ್ಣವಾಗಿ ಧ್ವಂಸ ಗೊಂಡಿದೆ.

