ಮೂಡುಬಿದಿರೆ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಾಧಿಸಬೇಕು ಎಂಬ ಹಂಬಲದಿಂದ ಯಶಸ್ಸಿನ ಹಾದಿ ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ. ಯಶಸ್ಸು ಎನ್ನುವುದು ನಮ್ಮೊಳಗಿದ್ದು, ಅದನ್ನು ತಿಳಿದುಕೊಳ್ಳುವ ಸೂಕ್ಷ್ಮತೆ ಇರಬೇಕು. ಪ್ರತಿಯೊಂದು ಯಶಸ್ಸಿನ ಹಿಂದೆ ತಮ್ಮ ಪ್ರಯತ್ನದ ಗುಟ್ಟು ಅಡಗಿದ್ದು, ಆ ಗುಟ್ಟು ಯಶಸ್ಸು ಕಂಡವನಿಗೆ ಮಾತ್ರ ತಿಳಿದಿರುತ್ತದೆ ಎಂದು ಅಂತರಾಷ್ಟ್ರೀಯ ಖ್ಯಾತ ಪ್ರಸಿದ್ಧ ಜೀವನಕೌಶಲ್ಯ ಗುರುಗೌರ್ ಗೋಪಾಲ್ ದಾಸ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ -ಸ್ಪೀಕರ್ಸ್ ಕ್ಲಬ್ ವಿದ್ಯಾರ್ಥಿ ವೇದಿಕೆಯಿಮದ ನಡೆದ “ಯಶಸ್ಸಿನ ರಹಸ್ಯ” ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಯಾವುದನ್ನು ಪಡೆದಿದ್ದೇವೆ ಎನ್ನುವುದಕ್ಕಿಂತ, ನಾವು ಹೇಗೆ ಜೀವನ ನಡೆಸುತ್ತಿದ್ದೇವೆ ಎಂಬುದೇ ಯಶಸ್ಸಿನ ಗುಟ್ಟು. ಯಶಸ್ಸು ಎಂದರೆ ಸಾಧನೆ ಎಂಬುದು ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವ ಸಂಗತಿ ಆದರೆ ವಾಸ್ತವ ಮನುಷ್ಯನಲ್ಲಿರುವ ಕೌಶಲ್ಯ, ಬೆಳವಣಿಗೆ, ವ್ಯಕ್ತಿತ್ವ ಹಾಗೂ ಪ್ರತಿಭೆಯೇ ಯಶಸ್ಸಿಗೆ ಬುನಾದಿಯಾದರೆ, ಒಬ್ಬ ವ್ಯಕ್ತಿಯ ವರ್ತನೆ ಆತನ ಯಶಸ್ಸಿಗೆ ಮುಖ್ಯ ಕಾರಣವಾಗಿರುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸನ್ನು ನಿರ್ಧರಿಸಲಾಗುತ್ತದೆ.
ಜೀವನ ಎಂಬುದು ಒಂದು ರೇಖೆ ಅಥವಾ ತಟಸ್ಥವಾಗಿರದೇ, ಏರಿಳಿತಗಳಿದ್ದಷ್ಟು ಅನುಭವ ಪಡೆಯಬಹುದು. ಹಾಗೂ ವಿವಿಧ ಆಯಾಮಗಳಿಂದ ಇದು ಸಾಧನೆಗೆ ದಾರಿಯಾಗುತ್ತದೆ.
ಜೀವನದ ಉತ್ತಮ ಹಾದಿಯ ಆಯ್ಕೆ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬದಲಾವಣೆ ಹಾಗೂ ಜನರಲ್ಲಿ ನಿರಂತರ ಸಂಪರ್ಕ ಯಶಸ್ಸಿನ ಮೂರು ಆಯಾಮಗಳು ಎಂದರು.
ಇದೇ ವೇಳೆಯಲ್ಲಿ ಗೋಪಾಲ್ ದಾಸ್ ಅವರ “ಲೈಫ್ಸ್ ಅಮೇಜಿಂಗ್ ಸೀಕ್ರೆಟ್ಸ್” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಮೂಡುಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಚಾರವರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯನಾ ಡಿ’ಸೋಜಾ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಚಿತ್ರ ಕೃಪೆ: ಮಾನಸ ಸ್ಟುಡಿಯೋ



