ಗುರುಪುರ: ಮಹಿಳಾ ದೌರ್ಜನ್ಯ, ಬಾಲ್ಯ ವಿವಾಹ, ಮಹಿಳಾ ಶೋಷಣೆಯ ಬಗ್ಗೆ ಮಹಿಳೆಯರು ಅರಿತು, ಇದರ ಬಗ್ಗೆ ಕಾನೂನು ಮಾಹಿತಿ ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ಗೌರಿ ಕೆ.ಎಸ್. ಹೇಳಿದರು. ಅವರು ಮಂಗಳವಾರ ಉಳಾಯಿಬೆಟ್ಟುಪಂಚಾಯತ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಮಹಿಳಾ ದೌರ್ಜನ್ಯದ ಕುರಿತು ಇರುವ ಕಾನೂನು ಮಾಹಿತಿಗಳನ್ನು ಮಹಿಳಾ ಗ್ರಾಮ ಸಭೆಯಲ್ಲಿ ಮಹಿಳೆಯರನ್ನುದ್ಧೇಶಿಸಿ ಮಾತನಾಡಿದರು.

ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೌಮ್ಯ ಪಂಡಿತ್ ಮಾತನಾಡಿ, ಬಾಲ್ಯವಿವಾಹದಂತಹಾ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಎಲ್ಲ ಮಹಿಳೆಯರು ಪಣತೊಡಬೇಕು ಎಂದರು. ಆರೋಗ್ಯ ಸಹಾಯಕಿ ನಿಖಿಲಾ ಅವರು ಮಹಿಳಾ ಆರೋಗ್ಯ ಮತ್ತು ಪೌಷ್ಠಿಕಾಂಶದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಊರ ಮಹಿಳೆಯರು ತಯಾರಿಸಿದ ವಿವಿಧ ಬಗೆಯ ಪೌಷ್ಠಿಕ ಆಹಾರವನ್ನು ಪ್ರದರ್ಶಿಸಲಾಯಿತು.
ಈ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಮಾರ್ ಪೆರ್ಮಂಕಿ, ಪಂಚಾಯತ್ ಸದಸ್ಯರಾದ ಕಮಲಾಕ್ಷ ತಲ್ಲಿಮಾರು, ಮೋಂತಿ ಪಿರೇರಾ, ಮಮತಾ ಸನಿಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಸಿದ್ದಪ್ಪ, ಕಾರ್ಯದರ್ಶಿ ನಂಜುಂಡಪ್ಪ, ಲೆಕ್ಕ ಸಹಾಯಕರಾದ ರಾಮಪ್ಪ, ಸ್ತ್ರೀ ಶಕ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಊರ ಮಹಿಳೆಯರು ಉಪಸ್ಥಿತರಿದ್ದರು.
