ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಕಾರ್ಮಿಕರ ಜೀವನಮಟ್ಟ ಸುಧಾರಣೆ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಹೇಳಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಶನಿವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಶಾಲೆ ಸಂಶೋಧಕ ಡಾ.ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಕಳೆದ 2016ರ ಬಳಿಕ ಎಲ್ಲಾ ಪೌರ ಕಾರ್ಮಿಕರಿಗೆ ಸರ್ಕಾರವು ಕನಿಷ್ಟ ವೇತನ ನಿಗದಿಗೊಳಿಸಿದೆ. ಮಾತ್ರವಲ್ಲದೆ ಕಾರ್ಮಿಕರನ್ನು ಸ್ವತಃ ಪುರಸಭೆ ವತಿಯಿಂದಲೇ ನೇರ ನೇಮಕಾತಿಗೊಳಿಸಿ ಬ್ಯಾಂಕಿನ ಮೂಲಕ ಮಾಸಿಕ ವೇತನ ನೀಡಲು ಸೂಚಿಸಿದೆ ಎಂದು ಹೇಳಿದರು.
ಉಡುಪಿ ಸಮಗ್ರ ಗ್ರಾಮೀಣ ಆಶ್ರಮ ಸಂಯೋಜಕ ಅಶೋಕ್ ಶುಭ ಹಾರೈಸಿದರು.

ಇದೇ ವೇಳೆ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ಮತ್ತು ಪೌರ ಕಾರ್ಮಿಕರಿಗೆ ಭತ್ತೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಹಾಯಕ ಎಂಜಿನಿಯರ್ ಇಕ್ಬಾಲ್, ಮೆನೇಜರ್ ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮುದಾಯ ಸಂಘಟಕಿ ಉಮಾವತಿ ವಂದಿಸಿದರು.
