ಕೈಕಂಬ : ಯಕ್ಷಗಾನ ಇಂದು ಉಚ್ಛ್ರಾಯ ಸ್ಥಿತಿಯಲ್ಲಿದೆ. ಎಳೆಯ ಮಕ್ಕಳು ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಯಕ್ಷಗಾನ ಈ ರಾಜ್ಯದ ಅಧಿಕೃತ ಕಲೆಯಾಗಿ ಘೋಷಣೆಯಾಗಬೇಕು. ಸರ್ಕಾರಗಳು ಮತ್ತು ಜನನಾಯಕರು ಈ ವಿಷಯದಲ್ಲಿ ಪುಕ್ಕಟೆ ಚರ್ಚಿಸುವ ಬದಲು, ಇಚ್ಚಾಶಕ್ತಿ ಪ್ರದರ್ಶಿಸಬೇಕು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದರು.ಗುರುಪುರ ಕೈಕಂಬದ ಗಣೇಶಕಟ್ಟೆಯಲ್ಲಿ ಜರುಗಿದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾ ಕೇಂದ್ರದಲ್ಲಿ “ತಕಧಿಮಿ’ ತಂಡ ಪ್ರಥಮ ವಾರ್ಷಿಕೋತ್ಸವ ಮತ್ತು ತಂಡದ ವಿದ್ಯಾರ್ಥಿಗಳ ರಂಗಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದೆ ಗುರುಕುಲ ಸಾನಿಧ್ಯ, ಗುರುಶಿಷ್ಯ ಸಂಬಂಧವಿತ್ತು. ಅಲ್ಲಿ ಕಲೆಗಳ ಬೋಧನೆ ನಡೆಯುತ್ತಿತ್ತು. ಈಗ ಗುರುಕುಲವೂ ಇಲ್ಲ, ಅಂತಹ ಶಿಷ್ಯರೂ ಇಲ್ಲ. ಅದೀಗ ಪ್ರಸ್ತುತವೂ ಅಲ್ಲ. ಈಗ ಏನಿದ್ದರೂ ಉನ್ನತ ಶಿಕ್ಷಣದ ಕಾಲ , ಮಕ್ಕಳಿಗೆ ಎಳವೆಯಲ್ಲೇ ಶಿಕ್ಷಣದೊಂದಿಗೆ ಕಲೆಗಳ ಅರಿವು ಮೂಡಿಸುವ ಕೆಲಸವಾಗಬೇಕು. ಬಾಲ್ಯದಲ್ಲೇ ಕಲೆಗಳ ಆಸಕ್ತಿ ಹುಟ್ಟಿಕೊಂಡರೆ ಅದು ಉನ್ನತ ಶಿಕ್ಷಣ ಗಳಿಸಿದರೂ ದೂರವಾಗದು ಎಂದರು.
ಆಶೀರ್ವಚನ ನೀಡಿ ಮಾತನಾಡಿದ ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮಿಜಿ, ಯಕ್ಷಗಾನ ಅದ್ಭುತ ಕಲೆ. ನೃತ್ಯ, ಹಾಡುಗಾರಿಕೆ, ಕುಣಿತ ಹೀಗೆ ಹಲವು ಸುಂದರ ಆಯಾಮಗಳಿಂದ ರೂಪುಗೊಂಡಿರುವ ಯಕ್ಷಗಾನ ಕಲೆಯಿಂದ ಮನುಷ್ಯಗೆ ಸಂಸ್ಕಾರ ಸಿಗುತ್ತದೆ. ಇಂತಹ ಸಂಘ ಸಂಸ್ಥೆಗಳು ಭವ್ಯ ಪರಂಪರೆಯ ಯಕ್ಷಗಾನ ಕಲೆಯ ಪೋಷಣೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಯಕ್ಷಗಾನ ಮನುಷ್ಯನಿಗೆ ಧಾರ್ಮಿಕ ವಿಚಾರಧಾರೆ ನೀಡುತ್ತದೆ. ಒಬ್ಬ ಕಷ್ಟದಲ್ಲಿರುವ ಕಲಾವಿದನೂ ತನ್ನ ಕಷ್ಟ ಬದಿಗಿಟ್ಟು ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಾನೆ ಎಂದು ಹಲವು ದೃಷ್ಟಾಂತಗಳೊಂದಿಗೆ ವಿವರಿಸಿದರು.

ಶ್ರೀ ಸುಬ್ರಹ್ಮಣ್ಯ ಕಲಾ ಆಟ್ರ್ಸ್ ಕೈಕಂಬ ಆಶ್ರಯದಲ್ಲಿ ಶ್ರೀ ರಾಮ ಸಭಾಂಗಣದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭಗೊಂಡ`ತಕಧಿಮಿ’ ತಂಡದ ವಿದ್ಯಾರ್ಥಿಗಳಿಂದ `ಪೂರ್ವರಂಗ’ ಯಕ್ಷಗಾನ ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ ನಡೆಯಿತು.

ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪಟ್ಲಪೌಂಡೆಸನ್ ಟ್ರಸ್ಟ್ ವತಿಯಿಂದ ಈಸಂಸ್ಥೆಗೆ ಸಹಕಾರ ನೀಡುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಧನಪಾಲ ಶೆಟ್ಟಿಗಾರ,ರಂಗಕಲಾವಿದ ಭೋಜರಾಜ ವಾಮಂಜೂರು,ಉಧ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಸುರೇಶ್ಕೆ.ಪಿ , ಪುಷ್ಪಾ ಕರ್ಕೇರ, ಆನೆಟ್ ಡಿ’ಸೋಜ, ಹರಿರಾವ್ ಕೈಕಂಬ, ಡಾ. ಶ್ರೀಪತಿ, ವಿನೋದ್ ಮಾಡ, ಶ್ರೀಧರ ರಾವ್, ಉಮೇಶ್ ಆರ್ ಭಂಡಾರಿ, ಜಯರಾಮ್ ಶೆಟ್ಟಿ ಹಾಗೂ ಸಂಸ್ಥಯ ಪುಷ್ಪರಾಜ್, ರಮೇಶ್ ಕುಲಶೇಖರ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಿವಣ್ಣ ಆಚಾರ್ಯ ಕುರ್ನಾಡು ದಂಪತಿಯನ್ನು ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ವಸ್ತ್ರ ವಿನ್ಯಾಸಕ ಕೋಟಿಯಪ್ಪ ಪೂಜಾರಿ ಬಡಕಬೈಲು ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಅಮೃತ ಸಂಜೀವಿನಿ ತಂಡದ ಸದಸ್ಯರನ್ನು ಗೌರವಿಸಲಾಯಿತು. ಮಾಧವ ಬಂಗೇರ ಕೊಳತ್ತಮಜಲು ಸ್ವಾಗತಿಸಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಕಂದಾವರ ವಂದಿಸಿದರು. ಮನೋರಂಜನೆ ಅಂಗವಾಗಿ ತಂಡದ ಕಲಾವಿದರು `ಶ್ರೀ ಹರಿ ಶ್ರೀ ರಾಮ ಶ್ರೀ ಕೃಷ್ಣ’ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.






