ಮೂಡುಬಿದಿರೆ: ಯಕ್ಷ ಮೇನಕಾ ಮೂಡುಬಿದಿರೆ ವತಿಯಿಂದ ಕಳೆದ ಐದು ವರ್ಷದಿಂದ ನೀಡುತ್ತಾ ಬಂದಿರುವ ಯಕ್ಷನಿಧಿ ಪುರಸ್ಕಾರಕ್ಕೆ ಈ ವರ್ಷ ಕಟೀಲು ಮೇಳದ ಹಿರಿಯ ಕಲಾವಿದ ಕೃಷ್ಣ ಮೂಲ್ಯ ಕೈರಂಗಳ ಅವರನ್ನು ಆಯ್ಕೆ ಮಾಡಲಾಗಿದೆ.

ಇಲ್ಲಿನ ಪೊನ್ನೆಚ್ಚಾರಿ ವೆಂಕಟರಮಣ ದೇವಸ್ಥಾನದಲ್ಲಿ ಸೆಪ್ಟಂಬರ್ 2ರಂದು ಭಾನುವಾರ ಸಂಜೆ 5ಕ್ಕೆ 13ನೇ ವರ್ಷದ ಯಕ್ಷನಾನ ತಾಳಮದ್ದಳೆ ಪ್ರಯುಕ್ತ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯಕ್ಷನಿಧಿ ಪುರಸ್ಕಾರ ಸಮರ್ಪಣೆ ಮಾಡಲಾಗುವುದು ಎಂದು ಯಕ್ಷ ಮೇನಕಾ ಮೂಡುಬಿದಿರೆ ಇದರ ಕಾರ್ಯಾಧ್ಯಕ್ಷ ಸದಾಶಿವ ರಾವ್ ನೆಲ್ಲಿಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್ಪೋರ್ಟ್ನ ಮಾಲಕ ಶ್ರೀಪತಿ ಭಟ್ ವಹಿಸಲಿದ್ದಾರೆ. ಮಂಗಳೂರು ರಂಗಸ್ಥಳ ಇದರ ಅಧ್ಯಕ್ಷ ದಿನೇಶ್ ಪೈ, ನಿವೃತ್ತ ಮುಖ್ಯೋಪಧ್ಯಾಯ ಗೋವರ್ಧನ ಹೊಸ್ಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಧ್ಯಾಹ್ನ ಗಂಟೆ 2ಕ್ಕೆ ಜಾಬಾಲಿ-ನಂದಿನಿ ಮತ್ತು ಸಂಜೆ 6ರಿಂದ ;ವಿಶ್ವಾಮಿತ್ರ ಮೇನಕೆ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಯಕ್ಷಮೇನಕಾದ ಉಪಾಧ್ಯಕ್ಷ ಕುಮಾರ್ ಗೌಡ, ಕಾರ್ಯದರ್ಶಿ ನಾಗರಾಜ ಅಚಾರ್ಯ ಮತ್ತು ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.
