ಮೂಡಬಿದಿರೆ: ಅಧಿಕಾರ ಮತ್ತು ಶ್ರೀಮಂತಿಕೆಯಿಂದ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ. ಸಾಧನೆಗಳಿಂದ ನಿಜವಾದ ಬದುಕಿನ ಗೆಲುವು ಇರುವುದು. ನಿಖರವಾದ ಗುರಿ ಮತ್ತು ಪ್ರಖರ ವಿಶ್ವಾಸ ಇದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾದ್ಯ ಎಂದು ಮಂಗಳೂರಿನ ಆ್ಯಡಿಶನಲ್ ಡೆಪ್ಯುಟಿ ಕಮಿಷನರ್ ಕುಮಾರ್ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ನಡೆದ ಮಾನವಿಕ ವಿಭಾಗದ ಉದ್ಯೋಗ ತರಬೇತಿ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯವಾದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಭವಿಷ್ಯದ ಗುರಿಯನ್ನಿರಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವತ್ತ ಶ್ರಮಿಸಬೇಕು. ನಮ್ಮ ಜೀವನ ಯಾವುದಕ್ಕೂ ಉಪಯೋಗಕ್ಕೆ ಬಾರದ ಕಾಡುಮಲ್ಲಿಗೆಯಂತಾಗದೆ, ಎಲ್ಲರೂ ಉಪಯೋಗಿಸುವ ನಾಡಿನ ಮಲ್ಲಿಗೆಯಂತಾಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುಂದುವರಿಯಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾ ವಿಭಾಗದ ವಾರ್ಷಿಕ ವಿಮರ್ಶಾ ವರದಿಯ ಪುಸ್ತಕನ್ನು ಬಿಡುಗಡೆಗೊಳಿಸಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್ ಉಪಸ್ಥಿತರಿದ್ದರು. ಅಭಿಷೇಕ್ ಸ್ವಾಗತಿಸಿ, ಅಭಿನಂದನ್ ವಂದಿಸಿದರು. ವಿದ್ಯಾರ್ಥಿನಿ ಚೈತಾಲಿ ರೈ ಕಾರ್ಯಕ್ರಮ ನಿರೂಪಿಸಿದರು.



