ಕಾಸರಗೋಡು: ಕಣ್ಣೂರು ಸಮೀಪದ ಕದಿರೂರು ಎಂಬಲ್ಲಿ ಸೋಮವಾರ ಸಂಜೆ ನಡೆದಿರುವ ಆರೆಸ್ಸೆಸ್ ನಾಯಕ ಎಲಂತೊಟ್ಟಿಲ್ ಮನೋಜ್(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು, ಕಳೆದ 15 ವರ್ಷಗಳ ಹಿಂದೆ ನಡೆದಿದ್ದ ಸಿಪಿಐಎಂ ನಾಯಕ ಪಿ.ಜಯರಾಜನ್ ಮೇಲಿನ ಕೊಲೆ ಯತ್ನದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಶಂಕಿಸಿದ್ದಾರೆ.

ಪಿ.ಜಯರಾಜನ್ ಮೇಲೆ ಓಣಂ ಹಬ್ಬದ ಸಂದರ್ಭ 1999ರ ಆಗಸ್ಟ್ 25ರಂದು ಕೊಲೆಯತ್ನ ನಡೆದಿತ್ತು. ಮನೋಜ್ ಮತ್ತಾತನ ತಂಡ ಜಯರಾಜನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಆದರೆ ಜಯರಾಜನ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆನಂತರ ಮನೋಜ್ ಜೈಲು ಸೇರಿದ್ದು ಬಳಿಕ ಬಿಡುಗಡೆಗೊಂಡಿದ್ದ. ಸಿಪಿಐಎಂ ನಾಯಕರಾಗಿದ್ದ ಜಯರಾಜನ್ ಕೊಲೆಯತ್ನ ಪ್ರಕರಣ ಆ ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಇದೀಗ ಓಣಂ ಹಬ್ಬದ ಸಂದರ್ಭದಲ್ಲೇ ಮನೋಜ್ನನ್ನು ಕಡಿದು ಕೊಲೆಗೈದ ದುಷ್ಕಮರ್ಿಗಳು ಹಗೆ ತೀರಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಸಿಪಿಐಎಂ ಕಾರ್ಯಕರ್ತರೆಂದು ಹೇಳಲಾಗುತ್ತಿದ್ದು ಹಳೆಯ ದ್ವೇಷಕ್ಕೆ ಮನೋಜ್ ಬಲಿಯಾಗಿದ್ದಾನೆ ಎನ್ನಲಾಗುತ್ತಿದೆ. ಮಂಗಳವಾರ ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಕೇರಳ ರಾಜ್ಯದಲ್ಲಿ ಬಂದ್ ಕರೆ ನೀಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮಂಜೇಶ್ವರ ಹಾಗೂ ಕಾಸರಗೋಡಿನಲ್ಲಿ ಬಂದ್ ಇರದಿದ್ದರೂ ಅಘೋಷಿತ ಕಫ್ಯರ್ೂ ವಾತಾವರಣ ನಿಮರ್ಾಣಗೊಂಡಿದೆ.




