ಬಂಟ್ವಾಳ: ಬಂಟ್ವಾಳದಲ್ಲಿ ತಾ| ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2018-19 ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕಲೋತ್ಸವ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆ.16ಮತ್ತು ಆ.17ರಂದು ನಡೆಯಲಿದ್ದು, ಆ ಪ್ರಯುಕ್ತ ಪೂರ್ವಭಾವಿ ಸಮಾಲೋಚನ ಸಭೆ ಸಿದ್ದಕಟ್ಟೆ ಸ.ಪ್ರೌ.ಶಾಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾಗುವಂತೆ ಸ್ಪರ್ಧೆಗಳನ್ನು ನಡೆಸಬೇಕು. ಇದಕ್ಕೆ ಇಲಾಖಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು. ಮಕ್ಕಳ ಸರ್ವಾಂಗೀಣ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸಂಘಟಿಸಬೇಕು. ಮಕ್ಕಳಿಗೆ ಯಾವುದೇ ಕುಂದು ಕೊರತೆ ಬಾರದಂತೆ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಬೇಕು. ದುಂದು ವೆಚ್ಚವಾಗದಂತೆ ನೋಡಿಕೊಂಡು, ಸರಕಾರದ ಅನುದಾನದ ಜತೆ ಸಂಗ್ರಹಿಸಿದ ನಿಧಿಯನ್ನು ಶಾಲಾಭಿವೃದ್ದಿಗೆ ಬಳಸಿಕೊಳ್ಳಬೇಕು. ವಿಜೇತ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕಗಳ ಬಹುಮಾನಕ್ಕೆ ಬೇಕಾಗುವ ವ್ಯವಸ್ಥೆ ದೊರಕಿಸಿಕೊಡಲಾಗುವುದು ಎಂದು ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಹೇಳಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಅವರು ಮಾತನಾಡಿ, ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಗುಣಮಟ್ಟದಲ್ಲಿ ಉತ್ತಮವಾಗಿದೆ. ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುವಂತೆ ಆಯೋಜನೆಗೊಳ್ಳಬೇಕೆಂದು ಹೇಳಿದರು. ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ನಡೆಸುವಂತೆ ಮತ್ತು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಸಮಯ ಪರಿಪಾಲನೆಯೊಂದಿಗೆ ಕಾರ್ಯಕ್ರಮ ನಡೆಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಶಾಲಾ ಉಪಪ್ರಾಂಶುಪಾಲ ರಮಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸರ್ಧೆಯಲ್ಲಿ ಸುಮಾರು ಎರಡು ಸಾವಿರ ಮಕ್ಕಳು ಭಾಗವಹಿಸಲಿದ್ದು, ಉತ್ತಮ ರೀತಿಯಲ್ಲಿ ಊರ ಪ್ರತಿಷ್ಠೆಗೆ ತಕ್ಕಂತೆ ಊರವರ ಸಹಕಾರದಿಂದ ಆಯೋಜಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಮಾಜಿ ಸದಸ್ಯ ರತ್ನಕುಮಾರ್ ಚೌಟ, ಶಿಕ್ಷಣ ಸಂಯೋಜಕಿ ಸುಜತಾ, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಗ್ರಾ.ಪಂ.ಸದಸ್ಯರಾದ ಎಸ್.ಪಿ. ಶ್ರೀಧರ್, ಮಾಧವ ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಶಾಂತಿ, ಸದಸ್ಯರಾದ ಜಯ ನಾಯ್ಕ, ಪ್ರೇಮಲತಾ, ಮಂದಾರತಿ ಶೆಟ್ಟಿ, ಪಂ.ಅ.ಅಧಿಕಾರಿ ಸಿಲ್ವಿಯಾ, ಪ್ರಮುಖರಾದ ಡಾ| ಸುದೀಪ್, ಉಮೇಶ್ ಗೌಡ, ಸೀತಾರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರಮಾನಂದ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಕುಮಾರ್ ವಂದಿಸಿದರು.

