ಮಂಗಳೂರು: ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣ ಸಭಾಂಗಣದಲ್ಲಿ ಯಕ್ಷಗಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಯಕ್ಷಗಾನ ಸಂಘಟಕ ಜನಾರ್ಧನ ಅಮ್ಮುಂಜೆಯವರಿಗೆ ಸನ್ಮಾನ ಕಾರ್ಯಕ್ರಮವು ಜು.೨೫ರಂದು ನಡೆಯಿತು. ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ಯಕ್ಷಸರಯೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮಂಗಳೂರು ಕರ್ನಾಟಕ ಬ್ಯಾಂಕ್ನ ಜಯರಾಮ್ ಭಟ್ ಪೋಳಲಿ ವಹಿಸಿಕೊಂಡಿದ್ದರು. ಶ್ರೀ ಕ್ಷೇತ್ರ ಕುಡುಪುವಿನ ತಂತ್ರಿಗಳು ಆಶೀರ್ವಚನ ನೀಡಿದರು. ಕೆನರಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಗುಂಡಿಲಗುತ್ತು ಶಂಕರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾದ ಮಂಗಳೂರು ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರದ ದಾಮೋದರ ನಿಸರ್ಗ ಹಾಗೂ ಮಂಗಳೂರು ಆಕಾಶವಾಣಿಯ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಭಾಗವಹಿಸಿದ್ದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಜಿ.ಕೆ ಭಟ್ ಪೆರಾಜೆ, ಹಾಸ್ಯಗಾರ ಸೀತಾರಾಮ್ ಕಟೀಲು ಹಾಗೂ ಮದುಸೂದನ ಅಲೆವೂರಾಯ ಉಪಸ್ಥತರಿದ್ದರು. ರವಿ ಅಲೆವೂರಾಯ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುಧಾಕರ್ ರಾವ್ ಪೇಜಾವರ ನಿರೂಪಿಸಿದರು.



