ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಸಭೆಬುಧವಾರ ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ನಡೆಯಿತು.
ದಲಿತರಿಗೆ ಜಾಗ ನೀಡುತ್ತಿಲ್ಲ, ದಲಿತರ ಮದುವೆಗೆ ನೀಡಲಾಗುವ ಸಹಾಯಧನ ರೂ. 5,000ವನ್ನೂ ಕೊಡುತ್ತಿಲ್ಲ ಈ ಮೂಲಕವಾಗಿ ದಲಿತರ ಸೌಲಭ್ಯಕ್ಕೆ ಕಡಿವಾಣ ಹಾಕಿದ್ದಾರೆ ಎಂದು ಗ್ರಾಮಸ್ಥ ಶಂಕರ ವಾಲ್ಪಾಡಿ ಗ್ರಾಮ ಸಭೆಯಲ್ಲಿ ಆರೋಪಿಸಿದ್ದಾರೆ. ಆಗ ಪಿಡಿಓ ಉತ್ತರಿಸಿ, ” ದಲಿತರಿಗೆ ಶೌಚಾಲಯ ನಿರ್ಮಿಸಿಕೊಡಲು ಈ ಮೊತ್ತವನ್ನು ಬಳಸಲಾಗಿದೆ. ಇನ್ನೂ ಅನೇಕ ಮಂದಿ ದಲಿತರು ಶೌಚಾಲಯ ರಹಿತರು ಪಂಚಾಯತ್ ವ್ಯಾಪ್ತಿಯಲ್ಲಿದ್ದು ಕೂಡಲೇ ಅವರು ಅರ್ಜಿ ಸಲ್ಲಿಸಬೇಕು ಎಂದು ಕೋರಿದರು. ದಲಿತರನ್ನು ಗ್ರಾ.ಪಂ. ಕಡೆಗಣಿಸುತ್ತಿದೆ ಎಂದು ಶಂಕರ ಆರೋಪಿಸಿದಾಗ, ನಾವು ಕಡೆಗಣಿಸಿಲ್ಲ, ವಿನಾ ಕಾರಣ ಹೋರಾಟ ಮಾಡಿದರೆ ನಮ್ಮ ನಿರ್ಣಯಗಳಂತೆ ನಡೆದುಕೊಳ್ಳಬೇಕಾಗುತ್ತದೆ’ ಎಂದು ಸದಸ್ಯ ಗಣೇಶ್ ಸ್ಪಷ್ಟಪಡಿಸಿದರು.
ವಾಲ್ಪಾಡಿಯ ಶಂಕರ ಅವರು ದಲಿತರಿಗೆ ಉಚಿತವಾಗಿ ನಳ್ಳಿ ನೀರು ನೀಡಬೇಕು. ನಾವು ನೀರಿನ ಬಿಲ್ಲು ಪಾವತಿಸುವುದಿಲ್ಲ ಬೇಡಿಕೆ ಇರಿಸಿದಾಗ ನೀರಿನ ಬಿಲ್ಲು ಪಾವತಿಸದೇ ಇರುವವರಿಗೆಲ್ಲ ನೋಟೀಸ್ ನೀಡಲಾಗಿದೆ ಎಂದು ಹೇಳಿದರು. ದಲಿತರ ಮೀಸಲು ಅನುದಾನವನ್ನು ನೀರಿನ ಬಿಲ್ಲು ಪಾವತಿಗೆ ಸರಿದೂಗಿಸಲು ಅಸಾಧ್ಯ ಈಗಾಗಲೇ ನಳ್ಳಿ ಜೋಡಣೆಗೆ ತಲಾ ರೂ. 1000ದಂತೆ ಒದಗಿಸಲಾಗಿದೆ. ಇನ್ನೂ ಈ ನಿಧಿಯನ್ನು ಬಳಸಿದರೆ ನಿಮ್ಮ ಇತರ ಅಗತ್ಯ ಅಭಿವೃದ್ಧಿ ಕಾರ್ಯ ನಡೆಸಲು ಕಷ್ಟವಾಗುತ್ತದೆ’ ಎಂದು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಶೆಟ್ಟಿ ಉತ್ತರಿಸಿದರು.
ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಂ. ಅಧ್ಯಕ್ಷೆ ವಸಂತಿ ವಹಿಸಿದ್ದರು. ವಿದ್ಯುತ್ ಸಮಸ್ಯೆ ಆಧಾರಿತವಾಗಿ ಮೆಸ್ಕಾಂ ಕಚೇರಿಗೆ, ಸಿಬಂದಿಗೆ ಕರೆ ಮಾಡಿದರೆ ಸಂಪರ್ಕ ಕಡಿತ ಮಾಡುವುದಲ್ಲದೆ ಉದ್ಧಟತನದಿಂದ ಮಾತನಾಡುತ್ತಾರೆ ಎಂದು ವಾಲ್ಪಾಡಿಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಈ ಭಾಗದಲ್ಲಿ ಬಿಎಸ್ಎನ್ಎಲ್ ರೇಂಜ್ ಸಿಗುವುದಿಲ್ಲ; ಕೆಲಸದ ಒತ್ತಡದಿಂದಲೂ ನಮಗೆ ಒಮ್ಮೊಮ್ಮೆ ಮಾತನಾಡಲು ಅಗುವುದಿಲ್ಲ’ ಎಂದರು.

ದೀನ್ದಯಾಳ್ ಉಪಾಧ್ಯಾಯ ಯೋಜನೆಯನ್ವಯ ಇನ್ನೂ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ, ಇನ್ನು ನಾವೇ ಸಂಪರ್ಕ ಕೊಡಬೇಕಾಗುತ್ತದೆ’ ಎಂದು ಪಂ. ಸದಸ್ಯ ಗಣೇಶ್ ಹೇಳಿದಾಗ, ಮಳೆಗಾಲದಲ್ಲಿ ಲೈನ್ಮನ್ಗಳು ತುಂಬ ಭಿಸ್ಹಿ ಇರ್ತಾರೆ; ಒಂದು ವೇಳೆ ನೀವೇ ಸಂಪರ್ಕ ಕಲ್ಪಿಸಿಕೊಂಡರೆ ಸಂಭಾವ್ಯ ಅಪಾಯಕಾರಿ ಸನ್ನಿವೇಶಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿ ಎಂದು ಹೇಳಿದರು.
ಗ್ರಾಮಸ್ಥ ಜಯಂತ ಜೇನುಗೂಡಿಗಾಗಿ ಕಳೆದ ವರ್ಷ ಅರ್ಜಿ ಹಾಕಿದವರಿಗಿನ್ನೂ ಗೂಡು ಕೊಟ್ಟಿಲ್ಲ ಎಂದು ಆರೋಪ ವ್ಯಕ್ತಪಡಿಸಿದಾಗ ಅರಣ್ಯ ಇಲಾಖೆಯಿಂದ 4 ಪೆಟ್ಟಿಗೆ ಕೊಟ್ಟಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ ಪಿ. ಪೋಳ್ ಹೇಳಿದರು. ತೋಟಗಾರಿಕಾ ಇಲಾಖೆಯ ಯುಗೇಂದ್ರ ಆವರು ” ಈ ಬಾರಿ ಕೊಡ್ತೇವೆ, ತರಬೇತಿ ಕೂಡಾ ನೀಡ್ತೇವೆ’ ಎಂದು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಕರಣಿಕೆ ಉಷಾ ರಬ್ಬರ್ ತೋಟ ಇರುವ ಪರಿಸರದಲ್ಲಿ ಮಾರಕ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ, ಜಾಗರೂಕರಾಗಿರಿ ಎಂದು ಸೂಚನೆ ನೀಡಿದರು. ಮೂರು ವರ್ಷಗಳ ಹಿಂದೆ ಕುಸಿದು ಬಿದ್ದ ವಾಲ್ಪಾಡಿ ಅರ್ಬಿ ಸೇತುವೆ ಪುನರ್ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರೂ. 10 ಲಕ್ಷ ಮೀಸಲಿರಿಸಿದೆ. ಆದರೆ ಇಲ್ಲೊಬ್ಬರ ಕುಮ್ಕಿ ಜಾಗವನ್ನು ಬಿಡದೆ ತೊಂದರೆ ಆಗಿದೆ ಎಂದು ಉಪಾಧ್ಯಕ್ಷರು ತಿಳಿಸಿದರು.
ಗ್ರಾಮಸ್ಥ ವಿವೇಕ್ ಫೆರ್ನಾಂಡಿಸ್ ಅವರು ಆಳಿಯೂರು -ಬೆಳುವಾಯಿ ರಸ್ತೆಯ ಬದಿಗಳಲ್ಲಿ ಮೆಸ್ಕಾಂ ವತಿಯಿಂದ ಮರದ ಕೊಂಬೆಗಳನ್ನು ಕಡಿದು ಹಾಗೆಯೇ ಬಿಡಲಾಗಿದೆ ಎಂದಾಗ ಕೂಡಲೇ ಕ್ರಮತೆಗೆದುಕೊಳ್ಳುವುದಾಗಿ ಮೆಸ್ಕಾಂ ಆಧಿಕಾರಿ ಉತ್ತರಿಸಿದರು. ಅಷ್ಟು ಮಾತ್ರವಲ್ಲದೆ ಪಶುಸಂಗೋಪನೆಗಾಗಿ ಹುಲ್ಲಿನ ಬೀಜಗಳನ್ನು ಪ.ಜಾತಿ, ಪ. ಪಂಗಡದವರಿಗೆ ಮಾತ್ರ ನೀಡುವುದೇ, ಬೇರೆಯವರಿಗೆ ಇಲ್ಲವೇ ? ಎಂದು ಕೇಳಿದಾಗ ಪಶುವೈದ್ಯಾಧಿಕಾರಿ “ಇಲ್ಲ” ಎಂದು ಸ್ಪಷ್ಟಪಡಿಸಿದರು.
ಸಿಬಂದಿ ಮಂಜುಳಾ ವರದಿ, ಸೌಮ್ಯ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಪಿಡಿಓ ಸುನಂದಾ ಜೈನ್ ನಿರೂಪಿಸಿದರು.


