ಪೊಳಲಿ : ಕರಿಯಂಗಳ ಗ್ರಾಪಂ ಸಭಾಗೃಹದಲ್ಲಿಬುಧವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ನೀರು, ವಿದ್ಯುತ್, ಮನೆ ದಾಖಲೆಪತ್ರಗಳ ವಿಷಯದಲ್ಲಿ ಗಂಭೀರ ಚರ್ಚೆ ನಡೆಸಿದರು.
ಮನೆ ನಂಬ್ರ ಇಲ್ಲದವರಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಕೆಲವರು ಇದಕ್ಕಾಗಿ ಅದೆಷ್ಟೋ ಸಮಯದಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮನೆ ನಂಬ್ರ ಸಿಗುವಾಗ ಮನೆಮಂದಿ ನೀರಿಲ್ಲದೆ ಸಾಯಬಹುದು. ಆದ್ದರಿಂದ ಮೊದಲು ನೀರು ಮತ್ತು ವಿದ್ಯುತ್ ಸಂಪರ್ಕಕ್ಕೆ ಅನುಮತಿ ಪಡೆಯಲು ಏನಾದರೊಂದು ಪರಿಹಾರೋಪಾಯ ಹುಡುಕಿ ಎಂದು ಗ್ರಾಮಸ್ಥರು ಒಕ್ಕೊರಳಿನಿಂದ ಬೇಡಿಕೆ ಇಟ್ಟರು.
ಗ್ರಾಮಸ್ಥರ ಸಮಸ್ಯೆ ಬಗ್ಗೆ ಸಂಬಂಧಿತ ಇಲಾಖೆಯೊಂದಿಗೆ ಪತ್ರ ಮುಖೇನ ವ್ಯವಹರಿಸುತ್ತೇವೆ. ಅದಕ್ಕಿಂತ ಮುಂಚೆ ಪಿಡಿಒ ಜೊತೆ ಚರ್ಚಿಸಿ, ಸಮಸ್ಯೆಗಳ ಪಟ್ಟಿ ಮಾಡಲಾಗುವುದು. ಸರ್ಕಾರದ ಅನುದಾನದಂತೆ ಗ್ರಾಮ ವ್ಯಾಪ್ತಿಯಲ್ಲಿ ಅಗತ್ಯ ಕಾಮಗಾರಿಗಳಿಗೆ ಹಣ ವಿನಿಯೋಗಿಸಲಾಗುವುದು. ದೊಡ್ಡ ಮೊತ್ತದ ಅನುದಾನ ಬಂದರೆ ಅದಕ್ಕೆ ತಕ್ಕಂತೆ ಕಾಮಗಾರಿಯೂ ನಡೆಯಲಿದೆ ಎಂದು ನೋಡೆಲ್ ಅಧಿಕಾರಿ ಕುಮಾರ್ ಭರವಸೆ ನೀಡಿದರು.

ವಿದ್ಯುತ್ ಬಿಲ್ ಸಮಸ್ಯೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಆರೋಗ್ಯ, ಪಶು ಸಂಗೋಪನಾ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಎಂಜಿನಿಯರ್ ಕೃಷ್ಣ , ಗ್ರಾಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ್ ರಾವ್, ಪಿಡಿಒ ಪದ್ಮ ನಾಯಕ್, ಗ್ರಾಮ ಲೆಕ್ಕಿಗ ಪ್ರಶಾಂತ್, ತಾಪಂ ಸದಸ್ಯ ಯಶವಂತ ಪೂಜಾರಿ, ಗ್ರಾಪಂ ಸದಸ್ಯರು ಮೊದಲಾದವರಿದ್ದರು. ದಾಕ್ಷಾಯಿನಿ ವರದಿ ವಾಚಿಸಿದರು. ಪಿಡಿಒ ಪದ್ಮ ನಾಯಕ್ ಸ್ವಾಗತಿಸಿದರು.
