ಮೂಡುಬಿದಿರೆ: ಸಾಂಘಿಕ ಬದುಕಿನಲ್ಲಿ ಸೇವಾ ಮನೋಭಾವದೊಂದಿಗೆ ಉತ್ತಮ ಮಾರ್ಗದರ್ಶಕರಾಗಬೇಕು. ಹೊಸತನಗಳಿಗೆ ತೆರೆದುಕೊಳ್ಳುವ ಮನಸ್ಸು, ಸೃಜನಶೀಲ ವ್ಯಕ್ತಿತ್ವ ನಮ್ಮದಾಗಬೇಕು ಎಂದು ರಾಷ್ಟ್ರೀಯ ಮಕ್ಕಳ ತಜ್ಞರ ಅಕಾಡೆಮಿ ಅಧ್ಯಕ್ಷ, ಮಂಗಳೂರು ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಮಕ್ಕಳ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ಟಿ. ಸೋನ್ಸ್ ಹೇಳಿದರು.

ಮೂಡುಬಿದಿರೆ ರೋಟರಿ ಕ್ಲಬ್ನ 51ನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ರಮೇಶ್ ಮತ್ತು ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ರೋಟರಿ ಜಿಲ್ಲಾ 3181ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಅವರು ಗಣೇಶ್ ಕಾಮತ್ ಎಂ. ಸಂಪಾದಕತ್ವದಲ್ಲಿ ರೂಪಿಸಲಾದ `ರೋಟಾದ್ರಿ’ ಬುಲೆಟಿನ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ರೋಟರಿ ಝೋನಲ್ ಲೆಫ್ಟಿನೆಂಟ್ ಬೆಳ್ತಂಗಡಿಯ ಡಾ. ಸುಧೀರ್ ಪ್ರಭು ಭಾಗವಹಿಸಿದ್ದರು.
ರೋಟಾಲೆಟ್ಸ್ ಹಸ್ತಾಂತರ:
`ರೋಟಾಲೆಟ್ಸ್’ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಮೂಡಬಿದಿರೆ ರೋಟರಿ ಕ್ಲಬ್ನ ಮಹತ್ವಪೂರ್ಣ ಯೋಜನೆಯಡಿ ಕೇಮಾರು, ತೋಡಾರು, ಬಿರಾವು, ಕಂಚಿಬÉೈಲ್ ಕೊಡ್ಯಡ್ಕ ಇಲ್ಲಿನ ನಾಲ್ವರು ಫಲಾನುಭವಿಗಳಿಗೆ ಶೌಚಾಲಯಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸುವ ಮೂಲಕ ಇದುವರೆಗೆ 117 ಮಂದಿ `ರೋಟಾಲೆಟ್ಸ್ ‘ ಫಲಾನುಭವಿಗಳಾದಂತಾಯಿತು.
ವಿದ್ಯಾರ್ಥಿ ಪುರಸ್ಕಾರ:
ಪರಿಸರದ ಸರಕಾರಿ ಪ್ರೌಢಶಾಲೆಗಳ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಲ್ಲಮುಂಡ್ಕೂರು ಬಾಲಕಿ ಅಕ್ಷತಾಳಿಗೆ 6 ತಿಂಗಳ ಡಯಬೆಟಿಕ್ ಇನ್ಸುಲಿನ್ ನೀಡಲಾಯಿತು.
ಸಮ್ಮಾನ:
ಘನತ್ಯಾಜ್ಯ ನಿರ್ವಹಣೆಗಾಗಿ ಮೂಡುಬಿದಿರೆ ಪುರಸಭೆಗೆ ರಾಜ್ಯ ಸರ್ಕಾರದ ಪುರಸ್ಕಾರ ಲಭಿಸಲು ಪ್ರಮುಖವಾಗಿ ಕಾರಣರಾದ ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್. ಅವರನ್ನು ಸಮ್ಮಾನಿಸಲಾಯಿತು.
87ರ ಸದಸ್ಯಬಲದ ಮೂಡುಬಿದಿರೆ ರೋಟರಿಗೆ ನಾಗರಾಜ್ ಹೆಗ್ಡೆ ಮತ್ತು ಸುನಿಲ್ ನಾಯಕ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ರೋಟರಿ ಜಿಲ್ಲಾ ಮಟ್ಟದಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ಡಾ.ಹರೀಶ್ ನಾಯಕ್, ಡಾ. ಮುರಳೀಕೃಷ್ಣ, ನಾರಾಯಣ್ಪಿ.ಎಂ., ಜಯರಾಮ್ ಕೋಟ್ಯಾನ್, ಮೊಹಮ್ಮದ್ ಶರೀಫ್, ಶ್ರೀಕಾಂತ್ ಕಾಮತ್, ಡಾ. ಅರವಿಂದ್ ಕಿಣಿ ಮತ್ತು ಡಾ| ಯತಿಕುಮಾರ ಸ್ವಾಮಿ ಗೌಡ ಅವರನ್ನು ಅಭಿನಂದಿಸಲಾಯಿತು. ಗೌರವ ಸದಸ್ಯ, ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ನಿರ್ಗಮನಾಧ್ಯಕ್ಷ ಶ್ರೀಕಾಂತ್ ಕಾಮತ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಸುವರ್ಣೋತ್ಸವ ವರ್ಷದ ವರದಿ ಮಂಡಿಸಿದರು. ಜೆ.ಜೆ. ಪಿಂಟೋ ನಿರೂಪಿಸಿದರು. ನೂತನ ಕಾರ್ಯದರ್ಶಿ ಸಿ. ಎಚ್. ಅಬ್ದುಲ್ ಗಫೂರ್ ವಂದಿಸಿದರು.
