ಕೈಕಂಬ : ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜನಪರ, ಸಮಾಜಮುಖಿ ಕೆಲಸ ಮಾಡುತ್ತಿರುವ ಇಲ್ಲಿನ ಹಿಂದೂ ಸಂಘಟನೆಗಳ ಜಂಟಿ ಕರ್ತವ್ಯ ಮೆಚ್ಚತಕ್ಕದ್ದು. ಇಂತಹ ಕಲಸಗಳು ಹೆಚ್ಚೆಚ್ಚು ನಡೆಯಲಿ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು. ಅವರು ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಮಂಡಳಿ, ದುರ್ಗಾವಾಹಿನಿ, ವಜ್ರದೇಹಿ ಶಾಖೆ ಗುರುಪುರ ಹಾಗೂ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ಕುಂಟಿಕಾನ ಮಂಗಳೂರು) ಇವರ ಜಂಟಿ ಆಶ್ರಯದಲ್ಲಿ ಗುರುಪುರದ ಶ್ರೀ ಸತ್ಯದೇವತಾ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎ ಜೆ ಆಸ್ಪತ್ರೆಯ ಬ್ಲಡ್ ಬ್ಯಾಂಕ ಅಧಿಕಾರಿ ಡಾ. ಅರವಿಂದ ಪಿ ಮಾತನಾಡುತ್ತ, ಎಲ್ಲೂ ರಕ್ತದ ಕೊರತೆಯಾಗಬಾರದೆಂಬ ಉದ್ದೇಶದಿಂದ ಆಸ್ಪತ್ರೆ ಬ್ಲಡ್ ಬ್ಯಾಂಕ್ ಕೆಲಸ ಮಾಡುತ್ತಿದೆ. ಪರೀಕ್ಷೆಗಾಗಿ ಮಾತ್ರ ನಾವು ಚಾರ್ಜು ಮಾಡುತ್ತೇವೆ. ರಕ್ತದಾನ ಕ್ರಮದಲ್ಲಿ ಕಾನೂನು(ಲೀಗಲ್) ಮತ್ತು ಕ್ಲಿನಿಕಲ್ ಎಂಬ ಎರಡು ವಿಧ ಪರಿಗಣಿಸಲಾಗಿದೆ. ಕಾನೂನು ಭಾಗದಲ್ಲಿ 18 ವರ್ಷ ಮೇಲ್ಪಟ್ಟವರು ರಕ್ತ ನೀಡಬಹುದೆಂದು ಹೇಳುತ್ತಿದ್ದರೂ, ಕ್ಲಿನಿಕಲ್ ಭಾಗದಲ್ಲಿ ರಕ್ತ ನೀಡುವವರನ್ನು ನಾವು ನಿರ್ಧರಿಸುತ್ತೇವೆ ಎಂದರು.
ಕೃಷ್ಣ ಕಜೆಪದವು ಸಂದರ್ಭೋಚಿತ ಮಾತನಾಡಿದರು. ವೇದಿಕೆಯಲ್ಲಿ ಪ್ರೇಂ ಕುಮಾರ್, ನಾಗೇಶ ಕೊಟ್ಟಾರಿ, ಚಂದ್ರಕಾಂತ ಭಟ್, ವಿದ್ಯಾ ಮಲ್ಯ, ವಿಜಯಾ, ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆ ಪ್ರಬಂಧಕಿ ಪ್ರಭಾ ರಾವ್, ಸುಶೀಲಾ ಭಂಡಾರಿ ಚಾಮಾಣಿ ಇದ್ದರು. ವಿಕ್ರಂ ಕಾರ್ಯಕ್ರಮ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ಗುರುಪುರ ಆಸುಪಾಸಿನ ನೂರಾರು ಮಂದಿ ಪಾಲ್ಗೊಂಡರು.
