ಬಂಟ್ವಾಳ: ಹಿರಿಯ ಕಾಂಗ್ರೆಸಿಗ, ಉದ್ಯಮಿ, ಪ್ರಗತಿಪರ ಕೃಷಿಕ, ಲಯನ್ಸ್ಕ್ಲಬ್ ಮಾಜಿ ಅಧ್ಯಕ್ಷ ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ಪದ್ಮ ಮೂಲ್ಯ(70) ಅಸೌಖ್ಯದಿಂದ ಜೂ.18 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.ಅವರು ಬಸವನಗುಡಿ ಶ್ರೀ ಗಣೇಶ್ ವುಡ್ ಇಂಡಸ್ಟ್ರೀಸ್ ಮಾಲಕರಾಗಿದ್ದರು. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದು, ಇದುವರೆಗೂ ಸಂಘದ ನಿರಂತರ ಚಟುವಟಿಕೆಗಳಿಗೆ ಪ್ರೋತ್ಸಾಹದಾರರಾಗಿದ್ದರು.
ಈ ಹಿಂದೆ ಮಡಂತ್ಯಾರು-ಪುಂಜಾಲಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಾರೆಂಕಿ ಗ್ರಾಮದ ಬಂಗೇರಕಟ್ಟೆ ಶ್ರೀ ಮಾರಿಗುಡಿಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಸಮಿತಿ ಮಾಜಿ ಅಧ್ಯಕ್ಷ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿದ್ದರು. ಮಡಂತ್ಯಾರು ಫ್ರೆಂಡ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಕೆಸರುಗದ್ದೆ ಹಗ್ಗಜಗ್ಗಾಟ ಸ್ಪರ್ಧೆ ನಡೆಸಿದ್ದರು.
ತಾಲೂಕಿನಲ್ಲಿ ಪ್ರಥಮವಾಗಿ ಮ್ಯಾಂಜಿಯಂ ಸಸ್ಯ ಕೃಷಿ ಮಾಡಿದ್ದರು.ವಿದ್ಯಾರ್ಥಿಗಳಿಗೆ ಉಚಿತ ಲೇಖನ ಪುಸ್ತಕ ವಿತರಣೆ, ಧಾರ್ಮಿಕ, ಸಾಂಸ್ಕøತಿಕ, ಕ್ರೀಡಾ ಪೋಷಕರಾಗಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಗಂಗಾಧರ ಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
