ಪುತ್ತೂರು: ಐದು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತರ ಕೊಲೆ, ದೈವ ದೇವರುಗಳಿಗೆ ಅಪಮಾನ, ಮಹಿಳಾ ದೌರ್ಜನ್ಯ, ಗೋಹತ್ಯೆ, ಜನರ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಟೀಕಿಸಿದ್ದಾರೆ.
ತಾಲೂಕಿನ ಪಡ್ನೂರು ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಪೆರ್ವೋಡಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಚುನಾವಣೆಯ ಪೂರ್ವದಲ್ಲಿ ಉತ್ತರ ದ್ರುವಕ್ಕೊಂದು ದಕ್ಷಿಣ ದ್ರುವಕ್ಕೊಂದು ಮುಖ ಮಾಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗ ಬಾಯಿ ಬಾಯಿ ಆಗಿದೆ. ಈ ಸಮ್ಮಿಶ್ರ ಸರ್ಕಾರ ತಾತ್ಕಾಲಿವಾಗಿದೆ. ರಾಜ್ಯದ ಜನರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ . ಈ ಸರ್ಕಾರ ಆರು ತಿಂಗಳ ಕಾಲ ಮಾತ್ರ ಆಡಳಿತ ನಡೆಸಲಿದ್ದು, ಬಳಿಕ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ರೈತರ ಸಾಲ ಮನ್ನಾ, ಕುಮ್ಕಿ ಹಕ್ಕು, ಅಕ್ರಮ ಸಕ್ರಮ ಮೊದಲಾದ ಸೌಲಭ್ಯಗಳು ರಾಜ್ಯದ ಜನತೆಗೆ ದೊರೆಯಲಿದೆ ಎಂದು ಭವಿಷ್ಯ ನುಡಿದರು.
ಈ ವೇಳೆ ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಡ್ನೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಜೋಯಿಸ ಯರ್ಮುಜ ಅವರು ಅಧ್ಯಕ್ಷತೆ ವಹಿಸಿದ್ದರು. ಕುಂಜಾರು ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಣಿ ಡಿ.ಗಾಣಿಗ, ಸದಸ್ಯೆ ಯಶೋಧ ಟಿ.ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಗೌಡ ಬಜತ್ತೂರು, ಶಂಭು ಭಟ್, ನಗರ ಮಂಡಲ ಕಾರ್ಯದರ್ಶಿ ರಾಮದಾಸ ಹಾರಾಡಿ, ಶಕ್ತಿ ಕೇಂದ್ರದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಬೂತ್ ಸಮಿತಿ ಅಧ್ಯಕ್ಷ ಗಣೇಶ್ ಪಳ್ಳ ಮತ್ತಿತರರು ಇದ್ದರು.
ತಾಲೂಕು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ನವೀನ್ ಮುಂಡಾಜೆ ಸ್ವಾಗತಿಸಿದರು. ಶ್ರೀಧರ ಕುಂಜಾರು ವಂದಿಸಿದರು. ಪೂವಪ್ಪ ದೇಂತಡ್ಕ ನಿರೂಪಿಸಿದರು.

