ಕೋಲಾರ: ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ಅಕ್ರಮ ಪಿಯು ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪಿಯು ಮಂಡಳಿ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯುತ್ತಿರುವ ಕಾಲೇಜುಗಳ ಪರವಾನಗಿಯನ್ನು ರದ್ದು ಮಾಡಬೇಕು ಹಾಗೂ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಬೇಕೆಂದು ರೈತ ಸಂಘದ ಕಾರ್ಯಕರ್ತರು ಇಲಾಖೆ ಎದುರು ಪ್ರತಿಭಟನೆ ನಡೆಸಿ ಉಪನಿರ್ದೇಶಕ ಪಾಪಣ್ಣರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಗಗನಕ್ಕೇರಿರುವ ಡೋನೇಷನ್ ಹಾವಳಿಯಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡದ ತಂದೆ ತಾಯಿ ಮಾನಸಿಕ ರೋಗಿಗಳಾಗುತ್ತಿದ್ದಾರೆ. ಕೋಲಾರ ಜಿಲ್ಲಾದ್ಯಾಂತ ನಾಯಿ ಕೊಡೆಗಳಂತೆ ತಲೆ ಎತ್ತಿ ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ರಾಜರೋಷವಾಗಿ ಕಾಲೇಜುಗಳಲ್ಲಿ ಶಿಕ್ಷಣವನ್ನು ಮಾರಾಟಕ್ಕಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಹೆಚ್ಚಳವಾಗಿದ್ದ ಕಾರಣ ಪಾಸಾದ ವಿದ್ಯಾರ್ಥಿಗಳಿಗೆ ನಾನಾ ರೀತಿಯ ಸುಳ್ಳು ಭರವಸೆಗಳನ್ನು ನೀಡಿ, ಆಕ್ರಮ ಕಾಲೇಜುಗಳಿಂದ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಾಂತ ಕೆಲವು ಕಾಲೇಜುಗಳು ಅನುಮತಿ ಪಡೆಯದೆ ಸ್ವಂತ ಕಟ್ಟಡವಿಲ್ಲದೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳ ಸ್ಥಳದಲ್ಲಿ ಯಾವುದೇ ಕಾಲೇಜುಗಳಿರುವುದಿಲ್ಲ ಕೆಲವು ಕಾಲೇಜುಗಳು ನಕಲಿ ಪಲಿತಾಂಶಗಳನ್ನು ಬ್ಯಾನರ್ಗಳಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳನ್ನು ಹಾಗೂ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ದೂರಿದರು.
ಲಕ್ಷ ಲಕ್ಷ ಡೋನೇಷನ್ ಪಡೆಯುವ ಕಾಲೇಜುಗಳ ಶಿಕ್ಷಣ ಇಲಾಖೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪರವಾನಗೆ ಪಡೆಯುವಾಗ ಒಂದು ಕೊಠಡಿಗೆ ಇಷ್ಟೇ ವಿದ್ಯಾರ್ಥಿಗಳೆಂಬ ನಿಯಮವಿರುತ್ತದೆ. ಹಾಗೂ ವಿವಿಧ ತಾಲ್ಲೂಕಿಗಳಿಂದ ಬರುವ ಮಕ್ಕಳಿಗೆ ಸೂಕ್ತವಾದ ಗುಣಮಟ್ಟದ ಬಸ್ಸ್ ವ್ಯವಸ್ಥೆಯಿರುವುದಿಲ್ಲ. ಇನ್ನೂ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ, ನಂತರ ಪೋಷಕರ ರಕ್ತಹೀರುವ ಕಾಲೇಜುಗಳ ಶಿಕ್ಷಣ ವಿರೋದಿ ನೀತಿಗೆ ಕಡಿವಾಣ ಇಲ್ಲದಂತಾಗಿದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ, ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ತಲೆಯೆತ್ತಿ ಪೋಷಕರೊಂದಿಗೆ ಚೆಲ್ಲಾಟವಾಡಿ ನಿಯಮಬಾಹಿರವಾಗಿ ಕಾಲೇಜುಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಕಿಡಿಕಾರಿದರು.
ಶಿಕ್ಷಣ ಇಲಾಖೆಗೆ ಶಿಕ್ಷಣದ ಮೇಲೆ ಇಚ್ಛಾಶಕ್ತಿಯಿದ್ದರೆ 1ವಾರದೊಳಗೆ ಕಾಲೇಜುಗಳ ಹಗಲುದರೋಡೆಗೆ ಕಡಿವಾಣ ಹಾಕಿ ವ್ಯಾಪಾರದ ಶಿಕ್ಷಣದಿಂದ ವಂಚಿತವಾಗುತ್ತಿರುವ ಬಡವರ ಇಚ್ಛಾಶಕ್ತಿ ಕಾಯಬೇಕು ಇಲ್ಲವಾದರೆ ಜಾನುವಾರುಗಳ ಸಮೇತ ಪಿಯು ಶಿಕ್ಷಣ ಇಲಾಖೆಗೆ ಬೀಗ ಜಡಿಯುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿದ ಉಪ ನಿರ್ದೇಶಕರಾದ ಪಾಪಣ್ಣನವರು ಮಾತನಾಡಿ, ಜಿಲ್ಲಾದ್ಯಾಂತ ಕಾಲೇಜುಗಳ ಡೋನೇಷನ್ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕ ದೂರುಗಳೂ ನಮ್ಮ ಗಮನಕ್ಕೂ ಬಂದಿದೆ ಆದರೆ ಕಾಲೇಜುಗಳ ಆಡಳಿತ ಮಂಡಳಿ ಪ್ರಭಾವಿ ರಾಜಕೀಯ ಒತ್ತಡದಿಂದ ನಾವು ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಜತೆಗೆ ಆಕ್ರಮವಾಗಿ ನಿಯಮಬಾಹಿರ ಕಾಲೇಜುಗಳು ನಡೆಯುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಚರ್ಚೆ ಮಾಡಿ, ಅಂತಹ ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದು ಮಾಡುವ ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಮೂರಾಂಡಹಳ್ಳಿ ಶಿವಾರೆಡ್ಡಿ, ಪುರುಷೋತ್ತಮ್, ಮುರಳಿ, ಪುತ್ತೇರಿ ರಾಜು, ರಂಜಿತ್, ಸುಪ್ರೀಂಚಲ, ಭರತ್, ನಾರಾಯಣ್, ಶಿವ, ವಡ್ಡಹಳ್ಳಿ ಮಂಜುನಾಥ್, ಬೇತಮಂಗಲ ಗಣೇಶ್, ಕ್ಯಾ
ಸಂಬಳ್ಳಿ ಪ್ರತಾಪ್, ಮುದುವಾಡಿ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

