ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಸಮೀಪದ ಕೆರೆಬಳಿ ಎಂಬಲ್ಲಿ ಗುಡ್ಡಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ.ನೇತೃತ್ವದ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿ ದನದ ಮಾಂಸ ಮತ್ತು ಎರಡು ಸಜೀವ ಕರು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ನಿವಾಸಿ ಇದಿನಬ್ಬ ಎಂಬವರ ಪುತ್ರ ಮಹಮ್ಮದ್ ರಶೀದ್ ಎಂಬಾತನು ಕಳವು ಮಾಡಿದ ಜಾನುವಾರುಗಳನ್ನು ಕಳೆದ ಹಲವು ಸಮಯದಿಂದ ಇಲ್ಲಿನ ಕೆರೆಬಳಿ ಗುಡ್ಡ ಪ್ರದೇಶದಲ್ಲಿ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ.ನೇತೃತ್ವದ ಪೊಲೀಸರು ರವಿವಾರ ದಿಢೀರ್ ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದಾನೆ.
ಈ ಸಂದರ್ಭದಲ್ಲಿ 11ಕಿಲೋ ದನದ ಮಾಂಸ ಪತ್ತೆಯಾಗಿದ್ದು, ವಧೆಗೆ ಸಿದ್ಧಪಡಿಸಿ ಕಟ್ಟಿ ಹಾಕಲಾಗಿದ್ದ ಎರಡು ಸಜೀವ ಕರುಗಳನ್ನು ಪೊಲೀಸರು ರಕ್ಷಿಸಿ ಪೊಲೀಸ್ ಠಾಣೆಗೆ ಕರೆ ತಂದಿರುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರೊಬೆಷನರಿ ಐಪಿಎಸ್ ಅಕ್ಷಯ್ ಎಂ.ಹಾಕೆ. ಸಿಬ್ಬಂದಿಗಳಾದ ಜನಾರ್ದನ, ಸುರೇಶ್ ಕುಮಾರ್, ಮಾಧವ, ಮಹೇಂದ್ರ, ಪುನೀತ್, ನಝೀರ್, ಕುಮಾರ್, ವಿಶಾಲಾಕ್ಷಿ ಪಾಲ್ಗೊಂಡಿದ್ದರು.

