ಉಡುಪಿ: ಕಳೆದ ರಾತ್ರಿ ಸುರಿದ ಸಿಡಿಲು ಸಹಿತ ಭಾರೀ ಮಳೆಗೆ ಉಡುಪಿ ಜಿಲ್ಲೆ ಅಲ್ಲೊಲ ಕಲ್ಲೊಲವನ್ನೆ ಸೃಷ್ಟಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ಉಡುಪಿಯ ಉದ್ಯಾವರ, ಪಿತ್ರೋಡಿ ಪರಿಸರದಲ್ಲಿ ಮರಗಳು ಧರೆಗುರುಳಿವೆ. ಹತ್ತಾರು ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತ ವಾಗಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸ್ಥಳೀಯರು ರಸ್ತೆಗೆ ಬಿದ್ದ ಮರಗಳನ್ನು ತೆರವು ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ.
ಗಲ್ಪ್ ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದ್ದ ಮೆಕುನು ಚಂಡಮಾರುತದ ಎಫೆಕ್ಟ್ ಕರಾವಳಿಯಲ್ಲಿ ಇನ್ನೂ ಕಡಿಮೆಯಾಗಿಲ್ಲ. ರಾಜ್ಯದ ಕರಾವಳಿಯಲ್ಲೂ ಆತಂಕದ ಛಾಯೆ ಇನ್ನು ಮುಂದುವರೆದಿದ್ದು, ಕರಾವಳಿಯ ಕಡಲ ತೀರದಲ್ಲಿ ದಿನದಿಂದ ದಿನಕ್ಕೆ ಕಡಲ ಅಲೆಗಳು ಮೇಲೇರಿ ಬರುತ್ತಿವೆ. ಕಡಲಿನ ಅಬ್ಬರಕ್ಕೆ ಕರಾವಳಿಯ ಜನರು ಆತಂಕ ಪಡುತ್ತಿದ್ದಾರೆ. ಕಡಲ ತೀರದಲ್ಲಿ ಸಮುದ್ರದ ಸುಮಾರು 500 ಮೀ. ದೂರದಿಂದಲೇ ಅಲೆಗಳು ಮೇಲೇರಿ ಬರುತ್ತಿರುವೆ. ಭಾರಿ ಗಾತ್ರದ ಅಲೆಗಳು ಸಮುದ್ರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕಾಪು, ಮಲ್ಪೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿ ಮುಖವಾಗಿದೆ.
ಸುರಿದ ಭಾರಿ ಮಳೆಯಿಂದಾಗಿ ಕೆಲವು ಕಡೆ ಒಳ ಚರಂಡಿ ವ್ಯವಸ್ಥೆ ಸೂಕ್ತವಿಲ್ಲದ ಕಾರಣ ಕೃತಕ ನೆರೆಯು ಸೃಷ್ಠಿಯಾಗಿತ್ತು. ಒಟ್ಟಿನಲ್ಲಿ ಮೂರು ತಿಂಗಳ ತೀವೃ ಬಿಸಿಲಿನ ಬೇಗೆಯ ನಂತರ ಜಿಲ್ಲೆಯ ಜನತೆಗೆ ರಿಲೀಫ್ ದೊರಕಿದೆ.


