ಕೈಕಂಬ : `ಗುರುದಯ’ ತಂಡದ ರಂಗ್ದ ಕಲಾವಿದೆರ್ ಗುರುಪುರ ಇದರ ಕಲಾವಿದ ಪ್ರಶಾಂತ್ ಗುರುಪುರ ಬರೆದಿರುವ ಹೊಸ ತುಳು ನಾಟಕವೊಂದರ ಮುಹೂರ್ತ ಮಾರ್ಚ್ ಒಂದರಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಸಮಕ್ಷಮದಲ್ಲಿ ನಡೆಯಿತು.
ತಂಡದಲ್ಲಿರುವ ಕಲಾವಿದರ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಒಂದು ಕೃತಿ ಯಶಸ್ವಿಯಾಗುತ್ತದೆ. ಇಂದು ಹೋಳಿ ಹುಣ್ಣಿಮೆ ಹಾಗೂ ಗುರುವಾರವಾಗಿದ್ದು, ಎರಡೂ ಸಂದರ್ಭಗಳು `ರಂಗ್'(ಬಣ್ಣ) ಹಾಗೂ `ಗುರು’ವಿನೊಂದಿಗೆ ಸಂಬಂಧ(ರಂಗ್ದ ಕಲಾವಿದೆರ್, ಗುರುದಯ ತಂಡ) ಹೊಂದಿದೆ. ಇದರಿಂದ ಈ ಕೃತಿಗೆ ಹೆಚ್ಚಿನ ಯಶಸ್ಸು ಲಭಿಸಲಿದೆ. ದೇವರ ಅನುಗ್ರಹದೊಂದಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ನಾಟಕ ಕೃತಿಯ ಮುಹೂರ್ತ ಸಂದರ್ಭದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮಿ ಆಶಿಸಿದರು.
ದ ಕ, ಉಡುಪಿ, ಮಂಜೇಶ್ವರ ಮತ್ತು ಮುಂಬೈಯಲ್ಲಿ ಹಲವು ಯಶಸ್ವಿ ಪ್ರಯೋಗ ಕಂಡ `ದಾಯೆ ಬದ್ಕೆರಾಪುಜಿ…?’ ನಾಟಕ ಬರೆದಿರುವ ಪ್ರಶಾಂತ್ ಗುರುಪುರರ ಎರಡನೇ ನಾಟಕ ಕೃತಿ ಇದಾಗಿದೆ. ಹೊಸ ನಾಟಕದಲ್ಲೂ ಪಚ್ಚು ಕೈಕಂಬ, ಶ್ರೀಕಾಂತ್ ಗುರುಪುರ, ಉತ್ಸವ್ ವಾಮಂಜೂರು, ರಂಜಿತ್ ನೀರುಮಾರ್ಗ, ಭರತ್ ಗುರುಪುರ, ಯಕ್ಷಿತ್ ಗಂಜಿಮಠ, ಚೇತನ್ ಕಾಜಿಲ, ತೇಜಸ್ವಿನಿ ಕೈಕಂಬ, ಸುಪ್ರಿಯಾ ಫರಂಗಿಪೇಟೆ, ಜೀವನ್ ಗುರುಪುರ ನಟಿಸಲಿದ್ದಾರೆ. ಲ. ಕಿಶೋರ್ ಡಿ ಶೆಟ್ಟಿ ಹಾಗೂ ನವೀನ್ ಶೆಟ್ಟಿ ಅಳಿಕೆ ಮಾರ್ಗದರ್ಶನದಲ್ಲಿ ಶೋಭಾ ಶೆಟ್ಟಿ ಶಕ್ತಿನಗರ ಸಲಹೆಯ ಈ ತಂಡಕ್ಕಿದೆ.
“ಇದೊಂದು ಕುತೂಹಲಭರಿತ ಹಾಸ್ಯ ಲೇಪಿತ ಸಾಮಾಜಿಕ ನಾಟಕವಾಗಿದೆ. ವಿಭಿನ್ನ ವಸ್ತು ವಿಷಯ ಒಳಗೊಂಡಿರುವ ಈ ಕೃತಿಗೆ ಎಪ್ರಿಲ್ ಒಂದರಂದು ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಸರಿಡಲಾಗುವುದು. ಹಿಂದಿನ ನಾಟಕಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಹೊಸ ಕೃತಿಗೂ ಇದೇ ರೀತಿಯ ಬೆಂಬಲ ನಿರೀಕ್ಷಿಸುವೆ” ಎಂದು ಕೃತಿಕಾರ, ನಟ ಹಾಗೂ `ರಂಗ್ದ ಕಲಾವಿದೆರ್’ ಸಾರಥ್ಯ ಹೊಂದಿರುವ ಪ್ರಶಾಂತ್ ಗುರುಪುರ ಹೇಳಿದ್ದಾರೆ.
