ಉಳಾಯಿಬೆಟ್ಟು: ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳಲು ಮುಸ್ಲಿಂ ಸಮುದಾಯದಲ್ಲಿ ಯಥೇಛ್ಛ ಅವಕಾಶವಿದ್ದು, ಆ ನಿಟ್ಟಿನಲ್ಲಿ ಸರಕಾರದ ಅನುದಾನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಮುದಾಯ ಉತ್ಸುಕರಾಗಬೇಕು ಎಂದು ದ. ಕ. ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಸಾಲೆ ಕೇಂದ್ರ ಜುಮಾ ಮಸೀದಿಯ “15ನೇ ಸ್ವಲಾತ್ ವಾರ್ಷಿಕೋತ್ಸವ” ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡವರನ್ನು ಕಾಲೆಳೆಯುವ ಬದಲು ಪ್ರೋತ್ಸಾಹವನ್ನು ನೀಡಿ ಹುರಿದುಂಬಿಸಬೇಕು. ತಾಯಿಯ ಪೋಷಕತೆಯಲ್ಲಿ ಮಮತೆಯ ಗುಣವಿರಬೇಕೆ ಹೊರತು ಅತ್ತೆಯಂತೆ ಹಂಗಿಸುವ ಛಟ ನಮ್ಮಲ್ಲಿ ಇರಬಾರದು ಎಂದು ಕಿವಿಮಾತು ಹೇಳಿದರು.
ಈ ವೇಳೆ ಕೇಂದ್ರ ಜಮಾತ್ ವತಿಯಿಂದ ದ.ಕ. ಜಿಲ್ಲಾ ವಕ್ಫ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹಾಜಿ ಕಣಚೂರು ಮೋನು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಲೆ ಜಮಾತ್ ಅಧ್ಯಕ್ಷ ಎಂ. ಇಸ್ಮಾಯೀಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಎಂ. ಮೊಯ್ದೀನ್ ಬಾವ, ಸೈಯದ್ ಸಫ್ವಾನ್ ತಂಙಳ್ ಕಣ್ಣೂರು, ಸ್ಥಳೀಯ ಖತೀಬ್ ಝುಬೈರ್ ಫೈಝಿ ಅಂಕೋಲ ಮತ್ತಿತರರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಅಹ್ಮದ್ ಕೋಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

