ಕಣ್ಣೂರು: ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ತಂಡವೊಂದು ಬಾಂಬ್ ಎಸೆದು ಬಳಿಕ ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಮಟ್ಟನ್ನೂರಿನಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.
ಮೃತರನ್ನು ಯುವ ಕಾಂಗ್ರೆಸ್ ಮಟ್ಟನ್ನೂರು ಬ್ಲಾಕ್ ಕಾರ್ಯದರ್ಶಿ ಶುಹೈಬ್ (30) ಎಂದು ಗುರುತಿಸಲಾಗಿದೆ.
ವ್ಯಾನ್ ನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ರಸ್ತೆ ಬದಿಯ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಸಂದರ್ಭದಲ್ಲಿ ಶುಹೈಬ್ ಮೇಲೆ ಮೊದಲು ಬಾಂಬ್ ಎಸೆದ ತಂಡವು ಬಳಿಕ ಕಲೆ ಮಾಡಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಎಡಯನ್ನೂರು ಎಂಬಲ್ಲಿ ಎಸ್ ಎಫ್ ಐ ಮತ್ತು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾದ ಕೆಎಸ್ ಯು ನಡುವೆ ಘರ್ಷಣೆ ನಡೆದಿತ್ತು. ಈ ದ್ವೇಷ ಘಟನೆಗೆ ಕಾರಣ ಎನ್ನಲಾಗಿದೆ.
ಇನ್ನು ಘಟನೆಯಲ್ಲಿ ಶುಹೈಬ್ ಜೊತೆಗಿದ್ದ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ನೌಶಾದ್ (29), ರಿಯಾಜ್ (28) ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯವನ್ನು ಖಂಡಿಸಿ ಯುಡಿಎಫ್ ಇಂದು ಕಣ್ಣೂರು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿದೆ.

