ಪುತ್ತೂರು: ಕಂಟೈನರೊಂದು ರೈಲ್ವೇ ಬ್ರಿಡ್ಜ್ ನಡಿ ಸಿಲುಕಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಇಲ್ಲಿನ ಮಿತ್ತೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಕಂಟೈನರ್ ಎತ್ತರ ಹೆಚ್ಚಾಗಿದ್ದು, ರೈಲ್ವೇ ಬ್ರಿಡ್ಜ್ ನಡಿ ಹೋಗಲು ಸಾಧ್ಯವಾಗದೆ ನಿಂತು ಬಿಟಿತು. ಇದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡು ಸವಾರರು ಪರದಾಡಬೇಕಾಯಿತು. ಅಲ್ಲದೆ, ಎರಡೂ ಬದಿಗಳಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಬ್ರಿಡ್ಜ್ ನಲ್ಲಿ ಭಾರೀ ಘನ ವಾಹನ ಸಂಚಾರ ನಿರ್ಬಂಧಕ ಕಬ್ಬಿಣದ ತಡೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಬ್ಬಿಣದ ತಡೆ ಮುರಿದುಬಿದ್ದಿದ್ದರೆ, ಲಾರಿ ರಸ್ತೆಗೆ ಅಡ್ಡವಾಗಿ ತಿರುಗಿ ನಿಂತಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಮುಂಭಾಗ ಜಖಂಗೊಂಡಿದೆ.
ರೈಲ್ವೇ ಹಳಿಯಲ್ಲಿ ಬಿರುಕುಂಟಾಗಿದೆ ಎಂಬ ಸಂಶಯವಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸದಷ್ಟು ರಸ್ತೆ ಬ್ಲಾಕ್ ಆಗಿತ್ತು. ಇದರಿಂದ ಮಾಣಿ, ನೇರಳಕಟ್ಟೆ, ಕೊಡಾಜೆಗಳಲ್ಲಿನ ಸಾರ್ವಜನಿಕರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆಗೊಳಗಾದರು.

