ಅಡ್ಡೂರು: ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶವನ್ನು ಉತ್ತುಂಗಕ್ಕೇರಿಸುವ ಕಾರ್ಯದಲ್ಲಿಸಹಭಾಗಿಯಾಗಬೇಕು ಎಂದು ಶಾಲಾ ನಿರ್ಮಾಣಕ್ಕೆ ಸ್ಥಳದಾನ ನೀಡಿದ ದಿ.ಶಂಕರ ಕಡಂಬಾರು ಅವರ ಪುತ್ರ ಹರ್ಷ ಕಡಂಬಾರು ಕರೆ ನೀಡಿದ್ದಾರೆ.
ಶನಿವಾರ ಇಲ್ಲಿನ ಸರಕಾರಿ ಶಾಲೆಯ 50ನೇ ಸಂಭ್ರಮಾಚರಣೆ ಪ್ರಯುಕ್ತ ಶಾಲಾಭಿವೃದ್ಧಿ -ಮೇಲುಸ್ತುವಾರಿ ಸಮಿತಿ, ಹಿತರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ “ಸುವರ್ಣ ಮಹೋತ್ಸವ”ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಶಾಲೆಯ ಅಭಿವೃದ್ಧಿಗೊಳಿಸುವ ಬಗ್ಗೆ ಅಮೇರಿಕದಲ್ಲಿರುವ ತನ್ನ ಪುತ್ರನೊಂದಿಗೆ ಮಾತನಾಡಿದ್ದು, ಮುಂದಿನ ವರ್ಷ ಈ ಶಾಲೆಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿ ಗೆ ಧನಸಹಾಯ ನೀಡುವುದಾಗಿ ಭರವಸೆ ನೀಡಿದ್ದಾನೆ ಎಂದು ತಿಳಿಸಿದರು.
ಜಿ.ಪಂ.ಸದಸ್ಯ ಯು.ಪಿ ಇಬ್ರಾಹೀಂ ಪ್ರಾಸ್ತಾವಿಕ ಮಾತನಾಡಿ, ಗ್ರಾಮದ ಶೈಕ್ಷಣಿಕ ರುವಾರಿ ದಿ.ಶಂಕರ ಕಡಂಬಾರು ಅವರು ನಮ್ಮ ಸರಕಾರಿ ಶಾಲೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಇಂದು ವಿದ್ಯಾರ್ಥಿಗಳು ಕಲಿಯೆಲ್ಲಿ ಮುಂದುವರಿಯಲು ಸಹಕಾರಿಯಾಗಿದ್ದು, ಅದಕ್ಕಾಗಿ ನಾನು ಅವರ ಕುಟುಂಬಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ನಡೆದ ಶಿಕ್ಷಣ ಸ್ಥಾಯಿ ಸಮಿತಿ ಸಭೆಯಲ್ಲಿ ತಾಲೂಕು ಹಾಗೂ ಗ್ರಾಮೀಣ ಮಟ್ಟದ ಕ್ರೀಡಾ ಕೂಟಗಳಿಗೆ ಶೇ.2ರಷ್ಟು ಅನುದಾನ ನೀಡಲು ನಿರ್ಣಯಿಸಿದ್ದು,ಮುಂದಿನ ದಿನಗಳಲ್ಲಿ ತಾನು ಇದಕ್ಕಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಧರ್ಮನ್ ಶೆಟ್ಟಿಗಾರ್ ಮಾತನಾಡಿ, ನಾನು ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ಇಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮೂಲಭೂತ ಸೌಲಭ್ಯಗಳಿರಲಿಲ್ಲ. ಈ ವೇಳೆ ನಾನು ತನ್ನ ಸ್ವಂತ ಖರ್ಚಿನಲ್ಲಿ ಶಾಲೆಗೆ ಬೇಕಾದ ಪೀಠೋಪಕರಣಗಳನ್ನು ಒದಗಿಸಿಕೊಟ್ಟಿದ್ದೆ ಎಂದು ಸ್ಮರಿಸಿರಿದರು.ಇಲ್ಲಿ ಪ್ರೌಢ ಶಾಲೆಯ ಅಗತ್ಯವಿದ್ದು, ಅದಕ್ಕಾಗಿ ಸ್ಥಳೀಯರು ಸ್ಥಳಾವಕಾಶವನ್ನು ನೀಡಬೇಕೆಂದು ಮನವಿ ಮಾಡಿದರು.
ನಿವೃತ್ತ ಶಿಕ್ಷಕಿ ಉಷಾ ಕುಮಾರಿ ಮಾತನಾಡಿ, ಹೇಗೆ ಒಂದು ದೀಪ ತನ್ನ ಪ್ರಜ್ವಲದಿಂದ ಅಂಧಕಾರ ಕತ್ತಲೆಯನ್ನು ಹೋಗಲಾಡಿಸುತ್ತೋ ಅದೇ ರೀತಿ ಈ ಶಾಲೆಯೂ ವಿದ್ಯಾರ್ಥಿ ಗಳಿಗೆ ವಿದ್ಯೆ ಒದಗಿಸುವ ಮೂಲಕ ಇನ್ನೂ ಅಭಿವೃದ್ಧಿಗೊಳ್ಳಲಿ ಎಂದು ಹಾರೈಸಿದರು.ಶಿಕ್ಷಣ ನಿಂತ ನೀರಲ್ಲ. ಅದು ನಿರಂತರ ಹರಿಯುತ್ತಿರಬೇಕು. ಯಾಕೆಂದರೆ ನಮ್ಮ ಹುಟ್ಟಿನಿಂದ ಕೊನೆಯ ಕ್ಷಣಗಳವರೆಗೂ ಆಗುವ ಅನುಭಗಳೆ ಶಿಕ್ಷಣವಾಗಿದೆ ಎಂದು ವಿವರಿಸಿದರು.
ಈ ವೇಳೆ ಶಾಲಾ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ ದಿ.ಶಂಕರ ಕಡಂಬಾರು ಅವರ ಪುತ್ರ ಹರ್ಷ ಕಡಂಬಾರು, ಸೊಸೆ ವಿಜಯಲಕ್ಷ್ಮಿ ಕಂಡಬಾರು, ನಿವೃತ್ತ ಶಿಕ್ಷಕ ಧರ್ಮಣ ಶೆಟ್ಟಿಗಾರ್, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಸುರೇಶ್ ರಾವ್, ನಿವೃತ್ತ ಶಿಕ್ಷಕಿ ಉಷಾ ಕುಮಾರಿ, ಪ್ಲೇವಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಪ್ಲೇವಿ ಮಾತನಾಡಿದರು. ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕಿಯಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ರಿಯಾಝ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಶಾಲಾ ಹಿತರಕ್ಷಣ ಸಮಿತಿಯ ಅಧ್ಯಕ್ಷ ಡಾ.ಇ.ಕೆ.ಸಿದ್ದೀಕ್, ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಅಹ್ಮದ್ ಬಾವಾ ತೋಕೂರು, ಬಿ.ಎ.ಚ್ .ಜಬ್ಬಾರ್, ಉದ್ಯಮಿ ಎ.ಕೆ.ಹಾರೀಸ್, ಹನೀಫ್, ವಾಮಯ ಕುಲಾಲ್, ಅಬ್ದುಲ್ ಜಲೀಲ್, ಅಬ್ದುಲ್ ರಹಿಮಾನ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಲಾ ಸ್ವಾಗತಿಸಿ, ಫಾರೂಕ್ ಕೆಳಗಿನಕೆರೆ ವಂದಿಸಿ, ಅಸ್ತಾರ್ ಅಡ್ಡೂರು ಕಾರ್ಯಕ್ರಮವನ್ನು ನಿರೂಪಿಸಿದರು.
ವಸ್ತು ಪ್ರದರ್ಶನ: ಈ ವೇಳೆ ಶಾಲಾ ಮಕ್ಕಳು ನಿರ್ಮಿಸಿದ ನಾನಾ ಬಗೆಯಾ ಭಿತ್ತಿ ಚಿತ್ರಗಳನ್ನು ಕೊಠಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದನ್ನು ಅಥಿತಿಗಳು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. 









