ಮಂಗಳೂರು : ಮರಳುಗಾರಿಕೆ ದೋಣಿಗಳಿಗೆ ಜಿಪಿಎಸ್ ಕಡ್ಡಾಯ ಎಂದು ಪುನರುಚ್ಚರಿಸಿದ ದ ಕ ಜಿಲ್ಲಾಧಿಕಾರಿ ಸಿಂಥೆಲ್ ಕುಮಾರ್, ಅಧಿಕೃತವಾಗಿ ಎರಡು ವರ್ಷದಿಂದ ಮರಳುಗಾರಿಕೆ ನಡೆಸುತ್ತಿರುವ ಸಾಂಪ್ರದಾಯಿಕ ಮರಳುಗಾರರಿಗೂ ಪರವಾನಿಗೆ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದಿದ್ದಾರೆ.
ನ. 28ರಂದು ಡೀಸಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಮರಳು ಗಣಿಗಾರಿಕೆ ಸಭೆಯಲ್ಲಿ, ಸಾಂಪ್ರಾದಾಯಿಕ ಮರಳುಗಾರಿಕೆಗೆ ಪರವಾನಿಗೆ ನೀಡುವಲ್ಲಿ ಎರಡು ವರ್ಷ ಅನುಭವದವರನ್ನೂ ಸೇರಿಸಿಕೊಳ್ಳಬೇಕು. ಇದರಿಂದ ಯಾರಿಗೂ ತೊಂದರೆಯಾಗದು. ಆದರೆ ನಿಯಮದಲ್ಲಿ ಸಡಿಲಿಕೆ ಮಾಡಬೇಕಾದೀತು ಎಂದು ಸಚಿವರು ಹೇಳಿದರು.
ಆದರೆ ಕೇಂದ್ರದ ಸಿಆರ್ಝಡ್ ಮಾರ್ಗಸೂಚಿಯಲ್ಲಿ ಸಡಿಲಿಕೆ ಕಷ್ಟ ಮತ್ತು ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಡೀಸಿ ಹೇಳಿದಾಗ, ಮರಳುಗಾರರ ಪರ ನಿಂತ ರೈ, ನಿಯಮ ಸಡಿಲಿಸದೆ ಹೋದಲ್ಲಿ ಬಡಪಾಯಿ ಸಾಂಪ್ರದಾಯಿಕ ಮರಳು ವ್ಯಾಪಾರಿಗಳು ಸಂಕಷ್ಟಕ್ಕೀಡಾಗಲಿದ್ದು, ಅವರನ್ನು ಎದುರಿಸಲು ಜನಪ್ರತಿನಿಧಿಗಳಿಗೆ ಕಷ್ಟವಾದೀತು ಎಂದರು.
ಸಭೆಯಲ್ಲಿ ಶಾಸಕ ಮೊೈದ್ದಿನ್ ಬಾವ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಖಾದರ್, ಮರಳು ಸಂಘಟನೆಯ ಮುಖಂಡರಾದ ಜಿತೇಂದ್ರ ಸುವರ್ಣ, ಮಯೂರ್ ಉಳ್ಳಾಲ್, ಚಂದ್ರಹಾಸ್ ಪಳ್ಳಿಪಾಡಿ ಮೊದಲಾದವರು ಇದ್ದರು.
……………….
ಬಾಕಿಯಾಗಿರುವ 171 ಸಾಂಪ್ರದಾಯಿಕ ಮರಳು ವ್ಯಾಪಾರಿಗ:ಇಗೆ ಮರಳುಗಾರಿಕೆ ಪರವಾನಿಗೆ ನೀಡುವಂತೆ ಇಂದಿನ ಸಭೆಯಲ್ಲಿ ಒತ್ತಾಯಿಸಲಾಯಿತು. ಕಾನೂನಿನಡಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಮರಳುಗಾರಿಕೆಗೆ ವ್ಯವಸ್ಥೆ ಮಾಡಿಕೊಡುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಆಗ ಯಾರಿಗೂ ಸಮಸ್ಯೆಯಾಗದು” ಎಂದು ದ ಕ ಜಿಲ್ಲಾ ಮರಳು ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಹೇಳಿದರು.
