ಕೈಕಂಬ : ಮಂಗಳೂರಲ್ಲಿ ಈಗ ಮಲೇರಿಯಾ ವರ್ಷ ಪೂರ್ತಿ ಗೋಚರಿಸುವಂತೆ, ಡೆಂಗ್ಯೂ ಕೂಡ ವರ್ಷಪೂರ್ತಿ ಜಾರಿಯಲ್ಲಿರುವ ಕಾಯಿಲೆ. ಆರೋಗ್ಯವಂತರಾಗಿರಲು ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಣೆಗೆ ಜನಜಾಗೃತಿ, ಮಾಹಿತಿ ಪಡೆದುಕೊಳ್ಳುವುದು ಅವಶ್ಯ ಎಂದು ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ರಾಜ್ ಆಳ್ವ ತಿಳಿಸಿದರು.
ಆಯುಷ್ ಇಲಾಖೆಯ ಡೆಂಗ್ಯೂ ಚಿಕಿತ್ಸಾ ಘಟಕ, ಜಿಲ್ಲಾ ವೆನ್ಲಾಕ್ ಆಯುಷ್ ಸಂಯುಕ್ತ ಆಸ್ಪತ್ರೆ ಮಂಗಳೂರು, ಕರ್ನಾಟಕ ಸರ್ಕಾರ ದಕ ಜಿಪಂ ಆಯುಷ್ ಇಲಾಖೆ, ಸರಕಾರಿ ಹೋಮಿಯೋಪಥಿ ಚಿಕಿತ್ಸಾಲಯ ಗುರುಪುರ, ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು-ಆಸ್ಪತ್ರೆ ಹಾಗೂ ಗುರುಪುರ ಗ್ರಾಪಂ ಜಂಟಿ ಆಶ್ರಯದಲ್ಲಿ ನ. 2ರಂದು ಗುರುಪುರ ಗ್ರಾಪಂ ಸಭಾ ಭವನದಲ್ಲಿ ನಡೆದ ಡೆಂಗ್ಯೂ-ಆಯುಷ್ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು, “ಆಧುನಿಕ ಯುಗದಲ್ಲಿ ನಾವು ಔಷಧಿಯೊಂದಿಗೆ ಬದುಕಲು ಕಲಿಯುತ್ತಿದ್ದೇವೆ. ಕಾಯಿಲೆ ನಮ್ಮ ನೆರಳಿನಂತೆ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ. ನಾವೆಲ್ಲರೂ ಬದುಕುತ್ತಿದ್ದೇವೆ, ಆದರೆ ಹೇಗೆ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಎದುರಾದಾಗ, ಕಾಯಿಲೆ ಮುಕ್ತರಾಗಿ ಮನುಷ್ಯರಂತೆ ಬದುಕಲು ಹೋಮಿಯೋಪಥಿಯಲ್ಲಿ ಕಡಿಮೆ ವೆಚ್ಚದ ಮದ್ದಿದೆ. ಇದರಲ್ಲಿ ಕಡಿಮೆ ಪ್ರಮಾಣದ ಔಷಧಿಯಿದ್ದು, ದೊಡ್ಡ ಮಟ್ಟದ ಪರಿಣಾಮ ಕೊಡುತ್ತದೆ. ಎಲ್ಲ ಕಡೆ ಮದ್ದು ಮಾಡಿದ ಬಳಿಕ, ಹೋಮಿಯೋಪಥಿಗೆ ಬಂದು, ಒಂದೆರಡು ಬಾರಿ ಮದ್ದು ಸೇವಿಸಿ ರೋಗ ಗುಣಮುಖವಾಗಿಲ್ಲ ಎನ್ನುವುದರ ಬದಲು ಯಾವುದೇ ರೋಗಕ್ಕೆ ಪ್ರಾರಂಭದಲ್ಲೇ ಹೋಮಿಯೋಪಥಿ ಚಿಕಿತ್ಸೆ, ಔಷಧಿ ಪಡೆದುಕೊಂಡರೆ ಉತ್ತಮ” ಎಂದರು.
ಮಕ್ಕಳಿಗೆ ಧೂಳಿನ(ಡಸ್ಟ್) ಅಲರ್ಜಿ ಬಗ್ಗೆ ಬಗ್ಗೆ ಮಾಹಿತಿ ನೀಡಿದ ಡಾ. ಆಳ್ವ, “ಹೋಮಿಯೋಪಥಿಯಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಪ್ರಮಾಣ ಹೆಚ್ಚಿಸಲು ಸಾಧ್ಯವಿದೆ. ಭಾರತದಲ್ಲಿ ಧೂಳು ತಪ್ಪಿಸಿ ಬದುಕಲು ಸಾಧ್ಯವಿಲ್ಲ. ಸಮಸ್ಯೆ ಧೂಳಿನದಲ್ಲ. ನಮ್ಮ ಆಹಾರ, ವಿಹಾರ ಪದ್ಧತಿ ಅದಕ್ಕೆ ಕಾರಣವಾಗುತ್ತದೆ. ಕೆಲವರು ಅದೇ ಧೂಳಿನಲ್ಲಿದ್ದರೂ ರೋಗ ಬರುವುದಿಲ್ಲ” ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಪಿಡಿಒ ಅಬೂಬಕ್ಕರ್, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಸದಸ್ಯರಾದ ಉಮೈ ಬಾನು, ಎ ಕೆ ಮೊಹಮ್ಮದ್, ರಜಿಯಾ, ಫಾತಿಮಾ, ಸಂಪಾ, ಗ್ಲಾಡಿಯಸ್, ಅನ್ವರ್ ಬಾಷಾ, ದಾವೂದ್ ಬಂಗ್ಲೆಗುಡ್ಡೆ, ಯಶವಂತ ಶೆಟ್ಟಿ, ಹನೀಫ್, ಸದಾಶಿವ ಕೆ ಶೆಟ್ಟಿ ಇದ್ದರು. ವೆನ್ಲಾಕ್ ಆಸ್ಪತ್ರೆಯ ಆಯುಷ್ ಆಡಳಿತಾಧಿಕಾರಿ ಡಾ. ಶೋಭಾರಾಣಿ ಈ ಮಾಹಿತಿ ಕಾರ್ಯಾಗಾರದ ಉದ್ದೇಶ ವಿವರಿಸಿ, ಅತಿಥಿಗಳ ಸ್ವಾಗತಿಸಿ, ವಂದಿಸಿದರು.
ಡಾ. ಪ್ರವೀಣ್ ರಾಜ್ ಆಳ್ವರರೊಂದಿಗೆ ಕಿರು ಸಂದರ್ಶನ :
* ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಡೆಂಗ್ಯೂ, ಚಿಕನ್ ಗೂನ್ಯಾ, ಮಲೇರಿಯಾ ಪ್ರಕೋಪ ಬೇಸಗೆಯಲ್ಲೂ ಇದೆಯಲ್ಲವೇ ?
ಡಾ. ಆಳ್ವ : ಖಂಡಿತ. ಆಧುನಿಕ ಯುಗದಲ್ಲಿ ನಮ್ಮ ಆಹಾರ ಪದ್ಧತಿ ಬದಲಾದಂತೆ ವಿವಿಧ ರೋಗಗಳನ್ನೂ ಆಹ್ವಾನಿಸಿಕೊಳ್ಳುತ್ತಿದ್ದೇವೆ. ಮಳೆಗಾಲದಲ್ಲಿ ವ್ಯಾಪಕ ಕಂಡು ಬರುವ ಸಾಂಕ್ರಾಮಿಕ ರೋಗ ಪ್ರಮಾಣ ಬೇಸಗೆಯಲ್ಲಿ ಕಡಿಮೆಯಾಗಿದ್ದರೂ, ಇದಕ್ಕೆ ಇಂತಹದ್ದೇ ಸೀಸನ್ ಎಂಬುದಿಲ್ಲ. ಯಾವಾಗ ಬೇಕಿದ್ದರೂ ಇವು ಕಾಣಿಸಿಕೊಳ್ಳಬಹುದು.
* ಡೆಂಗ್ಯೂ, ಚಿಕನ್ ಗುನ್ಯಾ ಈಗಲೂ ಪ್ರಾಣಾಪಾಯಕಾರಿ ಕಾಯಿಲೆಯಲ್ಲವೇ ?ನಿರ್ಲಕ್ಷ್ಯ ವಹಿಸಿದರೆ ಖಂಡಿತವಾಗಿಯೂ ಇವು ಜೀವಕ್ಕೆ ಕುತ್ತು ತರುವ ಕಾಯಿಲೆ. ಸಾಮಾನ್ಯ ವೈರಲ್ ಜ್ವರ ಎಂದು ಸಮ್ಮನೆ ಕೂರದೆ ತಕ್ಷಣ ವೈದ್ಯರ ಕಂಡು ಚಿಕಿತ್ಸೆ ಪಡೆಯಬೇಕು.
* ಈ ರೋಗ ಪತ್ತೆ ಹೇಗೆ ?
ಡಾ. ಆಳ್ವ : ಡೆಂಗ್ಯೂ ಜ್ವರ ಸಾಮಾನ್ಯ ಜ್ವರದಂತೆಯೇ ಆರಂಭವಾಗುತ್ತದೆ. ಆದರೆ ವಾರ ಕಳೆಯುತ್ತಲೇ ನಿತ್ರಾಣ ಆರಂಭವಾಗುತ್ತದೆ. ಬಳಿಕ ಜ್ವರದ ತೀವ್ರತೆಯಿಂದ ವ್ಯಕ್ತಿಯ ಚಟುವಟಿಕೆ ಕುಗ್ಗಿಸುತ್ತದೆ. ಈ ಹಂತದಲ್ಲೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.
* ಹೋಮಿಯೋಪಥಿಯಲ್ಲಿ ಚಿಕಿತ್ಸೆ ವಿಧಾನ ಹೇಗಿದೆ ?
ಡಾ. ಆಳ್ವ : ಬಿಡದೆ ಕಾಡುವ ಮೈಗ್ರೇನ್, ಉಬ್ಬಸ, ಗಂಟು ಸವೆತ, ಡಿಸ್ಕ್ ಸಮಸ್ಯೆ, ಗರ್ಭಕೋಶ ಮತ್ತು ಸ್ತನದ ಗೆಡ್ಡೆ, ಋತುಚಕ್ರ ಸಮಸ್ಯೆ, ಕರುಳಿನ ಸಮಸ್ಯೆಗೆ ಈ ವಿಧಾನದಲ್ಲಿ ಪರಿಣಾಮಕಾರಿ ಮದ್ದಿದೆ. ಇದರಲ್ಲಿ ಜೀವನ ಪರ್ಯಂತ ಔಷಧಿ ಸೇವಿಸಬೇಕಾಗಿಲ್ಲ. ದೀರ್ಘಕಾಲೀನ ರೋಗಗಳಿಂದ ಮತ್ತು ದೀರ್ಘಕಾಲೀನ ಔಷಧಿ ಸೇವನೆಯಿಂದ ಮುಕ್ತಿ ಗಳಿಸುವುದೇ ಹೋಮಿಯೋಪಥಿ ಚಿಕಿತ್ಸೆ ಉದ್ದೇಶ.
