ಬೆಂಗಳೂರು: ನನ್ನ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಇರುವ ವೇದಿಕೆಯಲ್ಲಿ ಟಿಪ್ಪು ಇತಿಹಾಸವನ್ನು ಬಿಚ್ಚಿಡುತ್ತೇನೆ, ಅಷ್ಟೆ ಅಲ್ಲದೇ ಧಿಕ್ಕಾರ ಕೂಗುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. 

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವರ ಹೆಸರು ಸೇರಿಸುವುದು ಶಿಷ್ಟಾಚಾರ, ಶಿಷ್ಟಾಚಾರದ ಪ್ರಕಾರ ಹೆಸರು ಮುದ್ರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅನಂತ್ ಕುಮಾರ್ ಹೆಗ್ಡೆ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸುವುದು ಬೇಡ ಎಂದು ಸ್ವತಃ ನಾನೇ ಹೇಳಿರುವುದರಿಂದ ಸರ್ಕಾರಕ್ಕೆ ನನ್ನ ಹೆಸರು ಸೇರಿಸದಿರಲು ಅವಕಾಶವಿದೆ. ಆದರೆ ರಾಜ್ಯ ಸರ್ಕಾರ ಹಠಮಾರಿತನದಿಂದ ನನ್ನ ಹೆಸರನ್ನು ಮುದ್ರಿಸಿದ್ದೇ ಆದಲ್ಲಿ ಆ ಕಾರ್ಯಕ್ರಮಕ್ಕೆ ಹೋಗುತ್ತೇನೆ, ಭಾಷಣದಲ್ಲಿ ಟಿಪ್ಪು ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಧಿಕ್ಕಾರ ಕೂಗುತ್ತೇನೆ, ತಾಕತ್ ಇದ್ದರೆ ಸಿದ್ದರಾಮಯ್ಯನವರು ನನ್ನನ್ನು ತಡೆಯಲಿ ಎಂದು ಹೆಗ್ಡೆ ಸವಾಲು ಹಾಕಿದ್ದಾರೆ.
ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಗೆ ಹಿಂದೂಪರ ಸಂಘಟನೆಗಳ ವಿರೋಧ ಮುಂದುವರೆದಿದೆ. “ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಈ ಕಾರಣದಿಂದಾಗಿ ನನ್ನ ಹೆಸರನ್ನು ಆಮಂತ್ರಣ ಪತ್ರದಲ್ಲಿ ಹಾಕಬೇಡಿ” ಎಂದು ಅವರು ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಪತ್ರ ರವಾನಿಸಿದ್ದಾರೆ. ಕಳೆದ ವರ್ಷವೂ ಅನಂತ್ ಕುಮಾರ್ ಹೆಗಡೆ ಅವರು ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರದಲ್ಲಿ ಹೆಸರು ಹಾಕದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
