ಬಂಟ್ವಾಳ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಬಂಟ್ವಾಳ ಕಸ್ಬಾ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮಕರಣಿಕರ ಮತ್ತು ಕಂದಾಯ ನಿರೀಕ್ಷಿಕರ ಕಚೇರಿ ನಾಪತ್ತೆಯಾಗಿದ್ದು, ಇದನ್ನು ಹುಡುಕಿಕೊಡುವಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ ಬಂಟ್ವಾಳ ತಹಶೀಲ್ದಾರ್ರನ್ನು ಒತ್ತಾಯಿಸಿದ್ದಾರೆ.
ಬಿ.ಸಿ.ರೋಡ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರದಂದು ಏಕಾಎಕಿಯಾಗಿ ಕಸ್ಬಾ ಗ್ರಾಮದ ಗ್ರಾಮಕರಣಿಕರ ಮತ್ತು ಕಂದಾಯ ನಿರೀಕ್ಷಿಕರ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು.

ಈ ಸ್ಥಳದಲ್ಲಿ ಪಂಜೆಮಂಗೇಶರಾಯರ ಸ್ಮಾರಕ ಭವನ ನಿರ್ಮಿಸಲು ಉದ್ದೇಶಿಸಿಲಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಅಧಿಕಾರಿಗಳನ್ನು ಸ್ಥಳದಿಂದ ತೆರಳಿ ಕಟ್ಟಡವನ್ನು ಖಾಲಿ ಮಾಡುವಂತೆ ಸೂಚಿಸಲಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತೆರವುಕಾರ್ಯ ಸ್ಥಗಿತಗೊಂಡಿದ್ದು, ಶನಿವಾರ ಮತ್ತೆ ಕಟ್ಟಡದ ಹಂಚು ತೆಗೆಯುವ ಕಾರ್ಯ ನಡೆದಿದ್ದು, ಕಡತಗಳನ್ನು ನಿಗೂಢ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಅವರು ಆರೋಪಿಸಿದರು.

ತಾಲೂಕು ಕಂದಾಯ ಇಲಾಖೆಯ ಅಧೀನದಲ್ಲಿರುವ ಈ ಕಚೇರಿ ಕಟ್ಟಡದ ತೆರವಿನ ಬಗ್ಗೆ ಜನರಿಗೆ ಯಾವುದೇ ಪೂರ್ವಸೂಚನೆ ನೀಡದೆ ಇರುವುದು ಈಗ ಜನರಲ್ಲಿ ಗೊಂದಲ ಉಂಟಾಗಿದೆ. ತಕ್ಷಣ ಕಸ್ಬಾ ಗ್ರಾಮದ ಗ್ರಾಮಕರಣಿಕರ ಮತ್ತು ಕಂದಾಯ ನಿರೀಕ್ಷಿಕರ ಕಚೇರಿಯನ್ನು ಹುಡುಕಿಕೊಡಿ ಇಲ್ಲದಿದ್ದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಅವರು ಎಚ್ಚರಿದ್ದಾರೆ.
ಇಲ್ಲಿ ಪಂಜೆಮಂಗೇಶರಾಯ ಸ್ಮಾರಕ ಭವನ ನಿರ್ಮಾಣವನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಜನರಿಗೆ ಯಾವುದೇ ಮಾಹಿತಿ ನೀಡದೆ ಮತ್ತು ಗ್ರಾಮಕರಣಿಕರ ಮತ್ತು ಕಂದಾಯ ನಿರೀಕ್ಷಿಕರ ಕಚೇರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ತೆರವುಗೊಳಿಸಿರುವುದು ಸರಿಯಲ್ಲ. ಕಸ್ಬಾ ಗ್ರಾಮದ ಜನರ ಅನುಕೂಲಕ್ಕಾಗಿ ಈ ಕಚೇರಿ ಬಂಟ್ವಾಳದಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸಿದ ಅವರು, ಹಿರಿಯ ಅಧಿಕಾರಿಗಳ ಈ ದುರ್ನಡತೆಯ ವಿರುದ್ಧ ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು
