ಚೆನ್ನೈ: ಕೊಯಮತ್ತೂರು ನಗರದಲ್ಲಿ ಬೀದಿ ಗುಡಿಸುವ ಪೌರ ಕಾರ್ಮಿಕರ ವಿದ್ಯಾರ್ಹತೆ ಎಂಬಿಎ, ಬಿಇ…?ಆಶ್ಚರ್ಯವಾದರೂ ಇದು ಸತ್ಯ. ಅನುಕಂಪದ ಆಧಾರದ ಮೇಲೆ ಮೃತ ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುವ ತಮಿಳು ನಾಡು ಸರಕಾರ, ಮಕ್ಕಳು ಬಿಇ, ಎಂಬಿಎ ಮಾಡಿದರೂ ಬೀದಿ ಗುಡಿಸುವ ಕೆಲಸವನ್ನೇ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 50 ಪರಿಶಿಷ್ಟ ಜಾತಿಗೆ ಸೇರಿದ ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೂ ಕೊಯಮತ್ತೂರು ಸ್ಥಳೀಯ ಸಂಸ್ಥೆ ಪೋಷಕರ ಪೌರ ಕಾರ್ಮಿಕ ಹುದ್ದೆಯನ್ನೇ ಮಾಡುವಂತೆ ಕೋರಿದೆ.ಸ್ಥಳೀಯ ಸಂಸ್ಥೆ ಇನ್ನೂ ಓಬಿ ರಾಯನ ಕಾಲದ ಆದೇಶಕ್ಕೆ ಬದ್ಧವಾಗಿದ್ದು, 2000ದಲ್ಲಿ ಜಾರಿಗೆ ತಂದ ಆದೇಶವನ್ನು ಇದುವರೆಗೂ ಪರಿಶೀಲಿಸಿಯೇ ಇಲ್ಲ. ಬಿಲ್ಟ್ಯಾಕ್ಸ್ ಕಲೆಕ್ಟರ್ ಹಾಗೂ ಕಿರಿಯ ಸಹಾಯಕ ಹುದ್ದೆಗೆ ಹತ್ತನೇ ತರಗತಿ ಕನಿಷ್ಠ ವಿದ್ಯಾರ್ಹತೆಯನ್ನೇ ಇನ್ನೂ ಮಾನದಂಡವಾಗಿರಿಸಿದೆ. ಈ ನೀತಿ ನೇರವಾಗಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ. ಸರಕಾರಿ ಟೈಪ್ರೈಟಿಂಗ್ ಪರೀಕ್ಷೆ ಪಾಸಾಗಿಲ್ಲ ಎಂಬೊಂದೇ ಕಾರಣದಿಂದ 50 ದಲಿತ ಸ್ಥಳೀಯ ಸಂಸ್ಥೆ ಪೌರ ಕಾರ್ಮಿಕರ ಪದವೀಧರ ಮಕ್ಕಳಿಗೆ ವೈಟ್ ಕಾಲರ್ ಉದ್ಯೋಗವನ್ನು ನೀಡಲು ನಿರಾಕರಿಸಿದೆ.ಸಾಮಾನ್ಯವಾಗಿ ಪೌರ ಕಾರ್ಮಿಕರು 10-11 ಸಾವಿರ ರೂ. ಮಾಸಿಕ ವೇತನ ಪಡೆಯಲಿದ್ದು, ಇದಕ್ಕಿಂತಲೂ ಶೇ.60-70ರಷ್ಟು ಅಧಿಕ ಕಿರಿಯ ಸಹಾಯಕ ಬಿಲ್ ಕಲೆಕ್ಟರ್ ಸಂಬಳವಿದೆ. ‘ಸರಕಾರದ ಈ ಆದೇಶದಿಂದ ಹಣಕ್ಕಿಂತಲೂ ನಮ್ಮ ಆತ್ಮ ಗೌರವಕ್ಕೆ ಅವಮಾನ ಮಾಡಿದಂತಾಗಿದೆ,’ ಎನ್ನುತ್ತಾರೆ ಶಿಕ್ಷಕಿ ಆಗಲು ಬಯಸುವ ಬಿ.ಎಡ್ ಪದವೀಧರೆ ಜೆ.ಭುವನೇಶ್ವರಿ.
