ಬಂಟ್ವಾಳ: ಕಲ್ಲಡ್ಕ ಸಮೀಪ ಗೋಳ್ತಮಜಲು ಗ್ರಾಮದಲ್ಲಿರುವ ಮೊಗರನಾಡು ಸಾವಿರ ಸೀಮೆಯ ಶ್ರೀ ಕ್ಷೇತ್ರ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಅನುಜ್ಞಾ ಕಲಶ ಸಹಿತ ಬಾಲಾಲಯ ಪ್ರತಿಷ್ಠೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೂನ್ 12ರಿಂದ 14ವರೆಗೆ ನಡೆಯಿತು.ಸೋಮವಾರ 12ರಂದು ಸಂಜೆ 6ಕ್ಕೆ ತಂತ್ರಿಗಳ ಆಗಮನ, ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಬಿಂಬ ಪರಿಗ್ರಹ, ಬಿಂಬ ಜಲಾವಾಸ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಇತ್ಯಾದಿ ಕಾರ್ಯಕ್ರಮಗಳು ನೆರವೇರಿದವು.
13ರಂದು ಮಂಗಳವಾರ ಬೆಳಗ್ಗೆ 7ರಿಂದ ಗಣಪತಿ ಹೋಮ, ಬಿಂಬಶುದ್ಧಿ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಹೋಮ, ಶಯ್ಯಾಪೂಜೆ, ಅನುಜ್ಞಾ ಪ್ರಾರ್ಥನೆ, ಸಂಹಾರ ತತ್ವ ಕಲಶಾಭಿಷೇಕ, ಜೀವ ಕಲಶಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯಾಗಮನ, ಶಯನಾದಿ ಕಾರ್ಯಕ್ರಮಗಳು ನಡೆಯಿತು. ಸಂಜೆ 7ರಿಂದ ಧ್ಯಾನಾವಾಸ, ಆದಿವಾಸ ಹೋಮ, ದ್ರವ್ಯ ಕಲಶ ಪೂಜೆ, ಪರಿಕಲಶ ಪೂಜೆ, ಕಲಶಾವಾಸ ನಡೆಯಿತು. 14ರಂದು ಬುಧವಾರ ಬೆಳಗ್ಗೆ 7ರಿಂದ ಗಣಪತಿ ಹೋಮದ ಬಳಿಕ ಬೆಳಗ್ಗೆ 10.26ರಿಂದ ಒದಗುವ ಶ್ರವಣ ನಕ್ಷತ್ರದಲ್ಲಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಬಾಲಾಲಯ ಪ್ರತಿಷ್ಠೆ, ಜೀವಕಲಶಾಭಿಷೇಕ, ದ್ರವ್ಯಕಲಶಾಭಿಷೇಕ, ಪರಿವಾರ ದೇವರಾದ ಸಿದ್ಧಿವಿನಾಯಕ, ಶ್ರೀ ಧರ್ಮಶಾಸ್ತ್ರ ಮತ್ತು ಶ್ರೀ ಕುಮಾರಿ ದೇವಿಯರ ಪುನ:ಪ್ರತಿಷ್ಠೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಗಣೇಶ ಶೆಟ್ಟಿ ಗೋಳ್ತಮಜಲು, ಶಾಂತಾರಾಮ ಶೆಟ್ಟಿ ಬೋಳಂತೂರು, ರಾಮಚಂದ್ರ ಬನ್ನಿಂತಾಯ ಚನಿಲ, ದೇವದಾಸ ಪೂಜಾರಿ ಅಡ್ಯನಡ್ಕ, ಗಣೇಶ್ ನಾಯ್ಕ ಚನಿಲ, ರಾಮಪ್ಪ ಪೂಜಾರಿ ಏಳ್ತಿಮಾರ್, ಕೃಷ್ಣಪ್ಪ ಮೂಲ್ಯ, ದಿನೇಶ್ ಶೆಣೈ ಕಲ್ಲಡ್ಕ, ಚೇತನಾ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೆ.ಪದ್ಮನಾಭ ರೈ, ಪಿ.ಬಟ್ಯಪ್ಪ ಶೆಟ್ಟಿ ನಿಟಿಲಾಪುರ, ಬಾಲಪ್ಪ ಗೌಡ ನಿಟಿಲಾಪುರ, ವಸಂತ ಎನ್, ಗಣೇಶ ನಾಯ್ಕ್ ಚನಿಲ, ಹೇಮಲತಾ ಗಟ್ಟಿ ಮತ್ತು ಅರ್ಚಕರಾದ ನಾರಾಯಣ ರಾವ್ ಕಾರಂತ ಸಹಿತ ಭಕ್ತವೃಂದ ಉಪಸ್ಥಿತರಿದ್ದರು.


