ಬಂಟ್ವಾಳ: ಪ್ರಕೃತಿಗಾಗಿ ಒಂದು ದಿನ – ನೀರಿಗಾಗಿ ಅರಣ್ಯ ಪರಿಕಲ್ಪನೆಯಡಿ ಬೀಜದುಂಡೆ ಬಿತ್ತನೆ ಅಭಿಯಾಣಕ್ಕೆ ಶುಕ್ರವಾರ ಬಂಟ್ವಾಳ ತಾಲೂಕಿನ ಕಕ್ಕೆ ಪದವು ಅರಣ್ಯದಲ್ಲಿ ಚಾಲನೆ ನೀಡಲಾಯಿತು. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಬಿತ್ತನೆಗೆ ಚಾಲನೆ ನೀಡಿ ತಾಪಮಾನ ಏರಿಕೆಯಿಂದ ಪ್ರಕೃತಿ ಅಸಮತೋಳನಗೊಳ್ಳುತ್ತಿದೆ. ಭೂಮಿಯನ್ನು ಉಳಿಸುವುದು, ಮರಗಳನ್ನು ಬೆಳೆಸುವುದು ಪ್ರತೀಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬೀಜದುಂಡೆ ಬಿತ್ತನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಅರಣ್ಯದಲ್ಲಿ ಶ್ರೀಗಂಧ, ಹಲವು, ಪುನರ್ಪುಲಿ, ಶಿವನೆ ಸೇರಿದಂತೆ ವಿವಿಧ ಜಾತಿಯ ಸುಮಾರು ಎರಡು ಸಾವಿರ ಬೀಜದುಂಡೆ ಬಿತ್ತನೆ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಕಕ್ಕೆಪದವು ಶ್ರೀ ಪಂಚದುರ್ಗಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಅರಣ್ಯದಲ್ಲಿ ಬೀಜದುಂಡೆ ಬಿತ್ತನೆ ಗೈದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಬಿಜೂರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್, ಹರಿಶ್ಚಂದ್ರ, ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಮೊದಲಾದವರು ಇದ್ದರು.
