ಬಂಟ್ವಾಳ:ಸಮಾಜದಲ್ಲಿ ಜಾತಿ ಮತ್ತು ಧರ್ಮ ಮಾತ್ರವಲ್ಲದೆ ಭಾಷೆ ಹಾಗೂ ಗಡಿ ಮತ್ತಿತರ ಅನಗತ್ಯ ವಿಚಾರದಲ್ಲಿ ಅಸಹಿಷ್ಣುತೆ ಹರಡುವ ಬದಲಾಗಿ ಕ್ಷಣಿಕ ಕಾಲದ ಜೀವನದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಪರಸ್ಪರ ಸೌಹಾರ್ದತೆಯಿಂದ ಎಲ್ಲರೂ ಒಟ್ಟಾಗಿ ಬಾಳುವುದೇ ನಿಜವಾದ ಧರ್ಮ ಮತ್ತು ಬದುಕು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಆ ಮೂಲಕ ಒಟ್ಟು ಸಾಮಾಜಿಕ ಅಭಿವೃದ್ಧಿ ಜೊತೆಗೆ ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಅರಳ ಗ್ರಾಮದ ಮುಲ್ಲಾರಪಟ್ನ ಮುಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ದಾರುಲ್ ಉಲೂಂ ಮದರಸ ಯುವಕ ಸಂಘ ಹಾಗೂ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ವತಿಯಿಂದ 12 ಮುಸ್ಲಿಂ ಜೋಡಿಗೆ ಭಾನುವಾರ ಏರ್ಪಡಿಸಿದ್ದ ಎರಡನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಸ್ತ ಕೇರಳ ಜಮೀಯತ್ತುಲ್ ಉಲಮಾ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ, ಪಾಣಕ್ಕಾಡ್ ಸೈಯದ್ ಅಬ್ದುಲ್ ಗಫೂರ್ ತಂಙಳ್ ಆಶೀರ್ವಚನ ನೀಡಿದರು. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ 12ಜೋಡಿಗೆ ನಿಖಾ ನೆವೇರಿಸಿದರು.
ಮಂಗಳೂರು ಎಸ್ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಮಾತನಾಡಿ, ಧಾರ್ಮಿಕ ಸಹಿಷ್ಣುತೆ ಅತ್ಯಗತ್ಯ ಎಂದರು.
ಚೊಕ್ಕಬೆಟ್ಟು ಜುಮ್ಮಾ ಮಸೀದಿ ಮುದರ್ರಿಸ್ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಪ್ರಧಾನ ಭಾಷಣದಲ್ಲಿ ಮಾತನಾಡಿ, ದೇಶದಲ್ಲಿ ಪ್ರತಿಯೊಂದು ಧರ್ಮವೂ ಇಲ್ಲಿನ ಪ್ರಾಕೃತಿಕ ಮತ್ತು ವೈಜ್ಞಾನಿಕ ಶಾಸ್ತ್ರಬದ್ಧವಾಗಿ ಧಾರ್ಮಿಕ ಆಚರಣೆ ನಡೆಯುತ್ತಿದೆ. ಇದರಿಂದಾಗಿ ಕೆಲವೊಂದು ವ್ಯಕ್ತಿಗಳು ನೀಡುವ ವಿವಾದಾತ್ಮಕ ಹೇಳಿಕೆಗಳಿಗೆ ನಾವು ಗಮನ ಹರಿಸುವ ಅಗತ್ಯವಿಲ್ಲ ಎಂದರು.
ಮುಲ್ಲಾರಪಟ್ನ ಜುಮ್ಮಾ ಮಸೀದಿ ಖತೀಬ ಪಿ.ಅಬ್ದುಲ್ ಖಾದಿರ್ ಮದನಿ ನಿಖಾ ಖುತುಬಾ ನೆರವೇರಿಸಿದರು. ಮಸೀದಿ ಅಧ್ಯಕ್ಷ ವಿ.ಎಚ್.ಹುಸೈನಬ್ಬ, ಕುಂಬ್ರ ಕೆಐಸಿ ವ್ಯವಸ್ಥಾಪಕ ಹುಸೈನ್ ದಾರಿಮಿ ಎಂಜಲಾಡಿ, ಶಾಸಕ ಕೆ.ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಸಚಿನ್ ಅಡಪ ಗುರುಪುರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಂ.ಬಿ.ಆಶ್ರಫ್ ಅರಳ, ನಾಗೇಶ ಶೆಟ್ಟಿ ಮಂಗಳೂರು, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಅರಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಯೋಗೀಶ ಪೂಜಾರಿ ಬಡಗಬೆಳ್ಳೂರು, ಪುರಸಭಾ ಸದಸ್ಯ ಮುನೀಷ್ ಆಲಿ, ನಂಡೊ ಪೆಂಙಳ್ ಮ್ಯಾರೇಜ್ ಅಭಿಯಾನ ಅಧ್ಯಕ್ಷ ನೌಷಾದ್ ಮಂಗಳೂರು, ಗುತ್ತಿಗೆದಾರ ಎಂ.ಎ.ಮಹಮ್ಮದ್, ಯು.ಟಿ.ಇಬ್ರಾಹಿಂ ಗುರುಪುರ, ಝಾಕಿರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿ ಇಮ್ರಾನ್ ಪದ್ರಂಗಿ, ನಿವೃತ್ತ ಮುಖ್ಯಶಿಕ್ಷಕ ಮೊಹಮ್ಮದ್ ಮಾಸ್ಟರ್ ಮತ್ತಿತರರು ಇದ್ದರು.ಇದೇ ವೇಳೆ ಬಡ ಹಿಂದೂ ಕುಟುಂಬಗಳಿಗೆ ವಿವಾಹ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಪರಿಹಾರಧನ ವಿತರಿಸಲಾಯಿತು.
ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್. ಸ್ವಾಗತಿಸಿದರು. ಉಪನ್ಯಾಸಕ ಮೊಹಮ್ಮದ್ ಹನೀಫ್ ಮುಲ್ಲಾರಪಟ್ನ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇರ್ಷಾದ್ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

