ವಿಕ ಸುದ್ದಿಲೋಕ ಕೈಕಂಬ : ಓಮಸತ್ವ ಹಾಗೂ ಗಿಡಮೂಲಿಕೆಗಳ ಔಷಧವನ್ನು ಮನೆಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ನಾಟಿವೈದ್ಯರಾಗಿ ಹೆಸರು ಮಾಡಿದ್ದ ವ್ಯಕ್ತಿಯೋರ್ವರು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಪೊಯ್ಯೆಮಜಲು ಎಂಬಲ್ಲಿನ ಹಳ್ಳದಲ್ಲಿ ಗುರುವಾರ ಮಧ್ಯಾಹ್ನದ ಜಾವ ಸಂಭವಿಸಿದೆ.
ಮೃತರನ್ನು ಈ ಹಿಂದೆ ಫರಂಗಿಪೇಟೆಯಲ್ಲಿ ವಾಸವಾಗಿದ್ದು, ಸದ್ಯ ಲೊರೆಟ್ಟೊ ಪದವು ಎಂಬಲ್ಲಿ ವಾಸವಾಗಿದ್ದ ಥೋಮಸ್ ಮಸ್ಕರೆನಸ್(65) ಎಂದು ತಿಳಿದು ಬಂದಿದೆ. ಇವರು ಪಲ್ಲಿಪಾಡಿ ಎಂಬಲ್ಲಿಗೆ ಔಷಧಿ ವಿತರಣೆಗೆಂದು ಬಂದಿದ್ದವರು ಕೈಕಾಲು ತೊಳೆಯಲು ಹಳ್ಳಕ್ಕೆ ಇಳಿದಾಗ ಆಕಸ್ಮಾತ್ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಸ್ಥಳೀಯರು ಈ ಪಲ್ಲಿಪಾಡಿ ಎಂಬಲ್ಲಿ ಸಂಚರಿಸುತ್ತಿದ್ದ ಸಂದರ್ಭ ಮೃತದೇಹ ಕಂಡು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿ ಜನಸೇರಿಸಿದ್ದರು. ಬಳಿಕ ಬಂಟ್ವಾಳ ಪೊಲೀಸರಿಗೂ ಸುದ್ದಿ ಮುಟ್ಟಿಸಲಾಗಿತ್ತು. ತಕ್ಷಣ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಿ, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯ್ತು.
ನಾಟಿ ವೈದ್ಯರಾಗಿ ಹೆಸರು ಪಡೆದಿದ್ದ ಥೋಮಸ್ ಸುತ್ತಮುತ್ತಲಿನ ಹಲವಾರು ಊರುಗಳಿಗೆ ಚಿರಪರಿಚಿತರಾಗಿದ್ದು ಔಷಧಿ ವಿತರಿಸುತ್ತಿದ್ದರು. ಮೃತರು ಮೂರು ಹೆಣ್ಣು, ಓರ್ವ ಪುತ್ರನನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



