ಮೂಡುಬಿದಿರೆ: ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಪೇಪರ್ಮಿಲ್ ಎಂಬಲ್ಲಿ ಬುಧವಾರ ಬೆಳಿಗ್ಗೆ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.
ಮೃತ ಯುವಕನನ್ನು ಸಿದ್ದಕಟ್ಟೆ ಸಂಗಬೆಟ್ಟುವಿನ ಥೋಮಸ್ ಡಿ’ಸೋಜಾ ಅವರ ಮಗ ಅರುಣ್ ಡಿ’ಸೋಜಾ(38) ಎಂದು ತಿಳಿದುಬಂದಿದೆ. ಈತ ತನ್ನ ಕುಟುಂಬದೊಂದಿಗೆ ಎರಡು ವರ್ಷದಿಂದ ಬೆಳುವಾಯಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಬುಧವಾರ ಬೆಳಿಗ್ಗೆ ಸಿದ್ಧಕಟ್ಟೆ ಚರ್ಚ್ನ ತೋಟದ ಕೆಲಸಕ್ಕೆಂದು ಅರುಣ್ ಡಿಸೋಜಾ ತನ್ನ ಸಹೋದರ ರೋಶನ್ ಡಿಸೋಜ ಜತೆ ದ್ವಿಚಿಕ್ರ ವಾಹನದಲ್ಲಿ ಹೊರಟಿದ್ದರು. ಪ್ರಾಂತ್ಯ ಗ್ರಾಮದ ಪೇಪರ್ ಮಿಲ್ ಎಂಬಲ್ಲಿ ಇವರ ವಾಹನಕ್ಕೆ ನಾಯಿ ಅಡ್ಡ ಬಂದಾಗ ವಾಹನವನ್ನು ಒಮ್ಮೆಗೆ ಬಲಕ್ಕೆ ತಿರುಗಿಸಿದರು. ಅದೇ ಹೊತ್ತಿಗೆ ಮೂಡುಬಿದಿರೆ ಕಡೆ ಬರುತ್ತಿದ್ದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಟಿಪ್ಪರ್ನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ವಾಹನದಲ್ಲಿ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ರಾಮಪೂಜಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

