ಬಂಟ್ವಾಳ: ಬಾಲ್ಯದಲ್ಲಿ ಗೆಳೆಯರೊಂದಿಗೆ ಸೇರಿ ಮೋಜಿಗಾಗಿ ಮಾದಕ ವಸ್ತುಗಳನ್ನು ಸೇವಿಸುವವರು ಯೌವನದಲ್ಲಿ ಅದರ ಸಂಪೂರ್ಣ ದಾಸರಾಗುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಈ ಸಾಮಾಜಿಕ ಪಿಡುಗು ಪ್ರಸ್ತುತ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ಖೇದಕರವಾಗಿದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಹೇಳಿದರು. ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ತುಂಬೆ ‘ಮಾದಕ ಬದುಕು ಭಯಾನಕ’ ಎಂಬ ಘೋಷಣೆಯೊಂದಿಗೆ ತುಂಬೆ ಗ್ರಾಮದಾದ್ಯಂತ ಡಿ. 31ರಿಂದ ಜ. 8ರವರೆಗೆ ಹಮ್ಮಿಕೊಂಡಿರುವ ಮಾದಕ ವ್ಯಸನದ ಕುರಿತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಬೆಳಗ್ಗೆ ತುಂಬೆ ಜಂಕ್ಷನ್ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಹಿರಿಯರು, ಕಿರಿಯರು ಎಂಬ ವಯಸ್ಸಿನ ತಾರತಮ್ಯವಿಲ್ಲದೆ ಜನರು ಮಾದಕ ಪದಾರ್ಥಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಸಮಾಜದ ಎಲ್ಲಡೆ ಬೇರು ಬಿಟ್ಟಿರುವ ಈ ಸಾಮಾಜಿಕ ಪಿಡುಗಿನ ಹಿಂದೆ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು ಅದರ ವಿರುದ್ಧ ನಾವು ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಅದು ನಮ್ಮ ಮನೆಗೂ ಬರಬಹುದು. ಸಮಾಜಕ್ಕೆ ಅಂಟಿರುವ ಈ ದೊಡ್ಡ ಪಿಡುಗನ್ನು ನಾವು ಇಲ್ಲವಾಗಿಸಿದಾಗ ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿದ್ದಲ್ಲಿ ಮಾತ್ರ ನಾವು ಹಾಗೂ ನಮ್ಮ ಮಕ್ಕಳಿಗೆ ಉತ್ತಮ ಬದುಕನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹಾದಿಯಲ್ಲಿ ಸಾಗಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ. ಆದರೆ ಇಂದು ಮಾದಕ ವಸ್ತುಗಳ ಚಟಕ್ಕೆ ಹೆಚ್ಚಾಗಿ ತುತ್ತಾಗುತ್ತಿರುವುದು ವಿದ್ಯಾರ್ಥಿ ಜೀವನದಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕುರಿತು ಪ್ರತೀ ಮನೆಯಲ್ಲೂ ಜಾಗೃತಿ ನಡೆಯಬೇಕಾಗಿದೆ. ತಮ್ಮ ಮಕ್ಕಳು ಮನೆಯಿಂದ ಹೊರ ಹೋದಾಗ ಅವರ ಚಲನವಲನೆಗಳ ಮೇಲೆ ನಿಗಾ ಇಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಕರ್ನಾಟಕ ಮಾದಕ ವ್ಯಸನ ಮುಕ್ತ ರಾಜ್ಯವಾದರೆ ಈಗಿರುವ ಪೊಲೀಸ್ ಸಂಖ್ಯಾ ಬಲದ 20 ಶೇಕಡ ಪೊಲೀಸರಿದ್ದರೆ ಶಾಂತಿ ಸುವ್ಯವಸ್ಥೆ ಕಾಪಾಡಬಹುದಾಗಿದೆ. ಸಮಾದಲ್ಲಿ ದರೋಡೆ, ಕೊಲೆ, ಗಲಾಬೆ, ಕ್ಷೋಬೆಗಳ ಹೆಚ್ಚಳಕ್ಕೆ ಮಾದಕ ವ್ಯಸನವೇ ಪ್ರಮುಖ್ಯ ಕಾರಣವಾಗಿದೆ. ಪುರುಷರಿಗೆ ಸೀಮಿತವಾಗಿದ್ದ ಮಾದಕ ವಸ್ತುಗಳು ಪ್ರಸ್ತುತ ಕೆಲವು ಕಾಲೇಜಿನ ಕ್ಯಾಂಪಸ್ಗಳಲ್ಲಿ ಹುಡುಗಿಯರು ಕೂಡಾ ಸೇವಿಸುತ್ತಿದ್ದಾರೆ ಎಂಬ ಸಮೀಕ್ಷೆ ಕಳವಲಕಾರಿಯಾಗಿದೆ. ಮಾದಕ ವ್ಯಸನದ ವಿರುದ್ಧ ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಬೇಧ ಭಾವವಿಲ್ಲದೆ ಜಾಗೃತಿ ಕಾರ್ಯಕ್ರಮಗಳು ನಡೆದೇ ತೀರಬೇಕಾಗಿದೆ. ಈ ನಿಟ್ಟಿನಲ್ಲಿ ಮಾದಕ ವ್ಯಸನದ ವಿರುದ್ಧ ಬಹಳ ಉತ್ತಮವಾದ ಕಾರ್ಯಕ್ರಮವನ್ನು ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಅಮ ಶಾಘ್ಲಹಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ತುಂಬೆ ಕುನಿಲ್ ಇಲ್ಮ್ ಸ್ಕೂಲ್ ಬಳಿಯಿಂದ ತುಂಬೆ ಜಂಕ್ಷನ್ವರೆಗೆ ತುಂಬೆ ಪದವಿ ಪೂರ್ವ ಕಾಲೇಜು, ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಊರಿನ ನಾಗರಿಕರಿಂದ ಆಕರ್ಷಕ ಜಾಥ ನಡೆಯಿತು. ಬಳಿಕ ವೇದಿಕೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮವನ್ನು ಬಿಂಭಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ಎ.ಕೆ.ರಕ್ಷಿತ್ ಗೌಡ ‘ಮಾದಕ ಬದುಕು ಭಯಾನಕ’ ಅಭಿಯಾನದ ವಿಶೇಷ ಲೋಗೋಕ್ಕೆ ಸಹಿ ಹಾಕುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮಾದಕ ಬದುಕು ಭಯಾನಕ ಅಭಿಯಾನ ಸಂಚಾಲಕ ಮುಹಮ್ಮದ್ ಇರ್ಫಾನ್ ಟಿ. ಅಧ್ಯಕ್ಷತೆ ವಹಿಸಿದ್ದರು. ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಬೋಧಿಸಿದರು. ಮಂಗಳೂರು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮನೋ ವೈದ್ಯಕೀಯ ವಿಭಾಗದ ಹಿರಿಯ ವೈದ್ಯ ಡಾ. ಅರುಣ್ ಭಟ್ ಪಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತುಂಬೆ ಮಹಾಲಿಂಗೇಶ್ವ ದೇವಸ್ಥಾನದ ಅರ್ಚಕ ವೆಂಕಟೇಶ್ ಕಾರಂತ, ತುಂಬೆ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ತುಂಬೆ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯೆ ಯಮುನಾ, ಕುನಿಲ್ ಇಲ್ಮ್ ಸ್ಕೂಲ್ನ ಮುಖ್ಯ ಶಿಕ್ಷಕಿ ಸಲೀನ ಎಂ.ಆರ್., ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ತುಂಬೆ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ಲ ಉಪಸ್ಥಿತರಿದ್ದರು. ಇಮ್ತಿಯಾಝ್ ಶಾ ಸ್ವಾಗತಿಸಿದರು. ಇಮ್ತಿಯಾಝ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.
