ಚೆನ್ನ: ತಮಿಳರ ಆರಾಧ್ಯದೇವತೆ, ಪುರುಚ್ಚಿ ತಲೈವಿ ಜಯಲಲಿತಾ ನಿಧನವು ಲಕ್ಷಾಂತರ ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿರುವ ಜೊತೆಗೇ ಅನೇಕ ಗೊಂದಲಗಳನ್ನೂ ಸೃಷ್ಟಿಸಿದೆ. ತಮಿಳುನಾಡಿನಲ್ಲಿ ಅಕ್ಷರಶಃ ಸಾಮ್ರಾಜ್ಞಿಯಾಗಿ ಸರ್ವಾಧಿಕಾರಿಯಂತೆ ಆಳ್ವಿಕೆ ನಡೆಸಿದ್ದ ಜಯಲಲಿತಾ ಬಳಿ ಇದ್ದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಯಾರ ಪಾಲಾಗುತ್ತದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯ ಚರ್ಚೆಯೂ ಭೂತಾಕಾರ ಪಡೆದಿದೆ.
ಜಯಾಲಲಿತಾ ಬಳಿ ಇರುವ ಹತ್ತಾರು ಎಕರೆ ಕೃಷಿ ಭೂಮಿ, 21 ಕೆಜಿ ಚಿನ್ನ, 1250 ಕೆಜಿ ಬೆಳ್ಳಿ, 4 ಬೃಹತ್ ವಾಣಿಜ್ಯ ಸಮುಚ್ಚಯಗಳು, ಚೆನ್ನೈನ ಪೋಯೆಸ್ ಗಾರ್ಡನ್ನಲ್ಲಿರುವ ವೈಭವೋಪೇತ ಬಂಗಲೆ ಸೇರಿದಂತೆ ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿ ಯಾರಿಗೆ ಸೇರುತ್ತದೆ ಎಂಬುದು ಈಗ ಇಡೀ ದೇಶದ ಕುತೂಹಲ ಕೆರಳಿಸಿದೆ. ಪೋಯೆಸ್ ಗಾರ್ಡನ್ನಲ್ಲಿರುವ ವೈಭವೋಪೇತ ನಿವಾಸ ಜಯಾರ ಪರಮಾಪ್ತೆ ಶಶಿಕಲಾ ನಟರಾಜನ್ ಅವರಿಗೆ ಸೇರಲಿದೆ. ಜಯಾ ಈಗಾಗಲೇ ಅವರ ಹೆಸರಿಗೆ ಉಯಿಲು ಬರೆದಿಟ್ಟಿದ್ದಾರೆ ಎಂಬ ಗುಸುಗುಸು ಕೂಡ ಹಬ್ಬಿದೆ. ಇನ್ನೊಂದು ಮೂಲದ ಪ್ರಕಾರ ಶಶಿಕಲಾ ಜಯಾರ ಸಮಸ್ತ ಆಸ್ತಿಯನ್ನು ತಮ್ಮ ಹೆಸರಿಗೇ ಬರೆಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಕೃಪೆ; ಈ ಸಂಜೆ

