ಬಂಟ್ವಾಳ: ವಿಕಲಚೇತನರಿಗೆ ಸರಕಾರದಿಂದ ದೊರಕುವ ಎಲ್ಲಾ ಸವಲತ್ತುಗಳು ಅತ್ಯಂತ ಅಚ್ಚುಕಟ್ಟಾಗಿ ಫಲಾನುಭವಿಗಳಿಗೆ ಸಿಗುವಂತೆ ಅಧಿಕಾರಿಗಳ ಜೊತೆ ಎಲ್ಲರು ಶಕ್ತಿ ಮೀರಿ ಶ್ರಮಿಸೋಣ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಮತ್ತು ಲಯನ್ಸ್ ಹಾಗೂ ಲಯನೆಸ್ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ವಿಕಲ ಚೇತನ ಮಕ್ಕಳ ವಿಶ್ವ ವಿಕಲಚೇತನರ ದಿನಾಚರಣೆ 2016-17 ಇದರ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವಿಕಲ ಚೇತನರ ಬಗ್ಗೆ ಅನುಕಂಪ ಬೇಡ ಮಾನವೀಯತೆ ಇರಲಿ, ಅವರಿಗೆ ಯಾವುದೇ ಮನಸ್ಸಿಗೆ ನೋವು ಮಾಡದೆ ಅವರನ್ನು ನಮ್ಮವರಂತೆ ಕಾಣುವ, ಕಷ್ಟಸುಖಗಳೊಂದಿಗೆ ನಾವು ಕೈಜೋಡಿಸಿ ಮಾನವರಾಗೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಲ|ಡಾ|ಬಿ.ವಸಂತ ಬಾಳಿಗಾ ವಹಿಸಿದ್ದರು. ವೇದಿಕೆಯಲ್ಲಿ ವಲಯ 2 ಪ್ರಾಂತ್ಯ 1 ರ ವಲಯಾಧ್ಯಕ್ಷ ಲ| ಜಯಂತ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಇದರ ಅಧ್ಯಕ್ಷ ಲಕ್ಷಣ್ ಕುಲಾಲ್ ಅಗ್ರಬೈಲು, ಲಯನೆಸ್ಸ್ ಕ್ಲಬ್ ಇದರ ಅಧ್ಯಕ್ಷೆ ಲ| ದೇವಿಕಾ ದಾಮೋದರ್, ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ನ ಅಧ್ಯಕ್ಷ ನಯನ ರೈ , ವಿಠಲ ಕೇಶವ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮತ್ತು ದೈಹಿಕ ಶಿಕ್ಷಣಾಧಿಕಾರಿ ಬಾಗೇವಾಡಿ ಉಪಸಿತರಿದ್ದರು. ಕಾರ್ಯಕ್ರಮದ ಬಳಿಕ ವಿಕಲ ಚೇತನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಬಿಆರ್ಸಿ ರಾಜೇಶ್ ಸ್ವಾಗತಿಸಿ, ಬಿಆರ್ಪಿ ಗಣೇಶ್ ವಂದಿಸಿದರು. ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು.

