ಮೂಡುಬಿದಿರೆ : ರಾಜ್ಯ ಪ್ರಶಸ್ತಿ ಪಡೆದ ಸರಕಾರೇತರ ಸಂಸ್ಥೆ ಜಮೀಯ್ಯತುಲ್ ಫಲ್ಹಾ ದ.ಕ, ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆಯ ಜಮೀಯ್ಯತುಲ್ ಫಲ್ಹಾ ಇದರ ವತಿಯಿಂದ ಬೆಳುವಾಯಿಯ ಚಿಲಿಂಬಿಯಲ್ಲಿ ನಿರ್ಮಾಣಗೊಳ್ಳಲಿರುವ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಭಾನುವಾರ ಶಿಲಾನ್ಯಾಸಗೈದರು.
ನಂತರ ಮಾತನಾಡಿದ ಅವರು ಕೌಶಲಾಭಿವೃದ್ಧಿಯ ಬಗ್ಗೆ ಶಿಕ್ಷಣವನ್ನು ಪಡೆದಾಗ ತಂತ್ರಜ್ಞಾನದ ಪರಿಚಯವಾಗುತ್ತದೆ.ಹಿಂದಿನ ಕಾಲದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲವಾದುದರಿಂದ ಶಿಕ್ಷಣದಿಂದ ವಂಚಿತವಾಗಿದ್ದರು. ಆದರೆ ಇಂದು ಜಮೀಯ್ಯತುಲ್ ಫಲಾಹ್ನಂತ ಜನಪರ ಸಂಸ್ಥೆಗಳಿಂದ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗಿದೆ. ಇದೀಗ ಕೌಶಲಾಭಿವೃದ್ಧಿ ಶಿಕ್ಷಣವನ್ನು ಪಡೆದು ತಮ್ಮ ಸ್ವಂತ ದುಡಿಮೆಗೆ ಅವಕಾಶವನ್ನು ಕಲ್ಪಸಿ ಕೊಡುವ ಮೂಲಕ ಮುಸ್ಲಿಂ ಸಹಿತ ಇತರ ಧರ್ಮಿಯರಿಗೂ ಸಹಕಾರಿಯಾಗಿದೆ ಎಂದು ಹೇಳಿದರು.

ಮೂಡುಬಿದಿರೆ ಜುಮ್ಮಾ ಮಸೀದಿಯ ಖತೀಬ ಮೌಲಾನಾ ಮೊಹಮ್ಮದ್ ಮುಸ್ತಾಫಾ ಯಾಮಾನಿ ದುವಾ ನೆರವೇರಿಸಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಕಟ್ಟಡದ ನೀಲ ನಕಾಶೆಯನ್ನು ಅನಾವರಣಗೊಳಿಸಿದರು. ದ.ಕ ಉಡುಪಿ ಜಿಲ್ಲೆಯ ಜಮೀಯ್ಯತುಲ್ ಫಲ್ಹಾನ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮುಸ್ಲಿಂರು ಕೆಲವು ವರ್ಷಗಳ ಹಿಂದೆ ಜಿಲ್ಲೆಗೆ ಬಂದಾಗ ಅವರನ್ನು ಪ್ರೀತಿಯಿಂದ ಸ್ವೀಕರಿಸಿ ಇಲ್ಲಿ ನೆಲೆಸಲು ಹಾಗೂ ಮಸೀದಿಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟವರು ಬಂಟರು ಮತ್ತು ಜೈನ ಧರ್ಮದವರು. ಹಿಂದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ. ಆದರೆ ಜಮೀಯ್ಯುತುಲ್ ಫಲಾಹ್ನಿಂದಾಗಿ ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತ್ತಾಗಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ಕೆ.ಪಿ ಜಗದೀಶ ಅಧಿಕಾರಿ, ಜಮೀಯ್ಯತುಲ್ ಫಲಾಹ್ನ ಪೌಂಡರ್ ಮೊಹಮ್ಮದ್ ಇಕ್ಬಾಲ್ ಯೂಸುಫ್, ಎನ್ಆರ್ಸಿಸಿಯ ಅಮೀರ್ ಮನ್ಸೂರ್ ಆಲಿ ಅಹಮ್ಮದ್, ಫೌಂಡರ್ ಸದಸ್ಯ ಅಬ್ದುಲ್ ಖಾದರ್, ಉದ್ಯಮಿ ಮುಸ್ತಾಫಾ ಎಸ್.ಎಂ, ಮುಂಬೈ ಘಟಕದ ಮಹಮ್ಮದ್ ಸಲೀಮ್, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಮೀಯ್ಯತುಲ್ ಫಲಾಹ್ನ ಶೈಖ್ ಅಬ್ದುಲ್ ಗಫೂರ್, ಜಮೀರ್ ಅಂಬರ್ ಸಿ.ಎ, ಸಲೀಮ್ ಹಂಡೆಲ್ ಉಪಸ್ಥಿತರಿದ್ದರು. ಮೂಡುಬಿದಿರೆ ವಲಯ ಘಟಕದ ಅಧ್ಯಕ್ಷ ಅಬ್ದುಲ್ ರವೂಫ್ ಸ್ವಾಗತಿಸಿದರು. ಹಸ್ದುಲ್ಲಾ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯದ್ ಜುಬೇರ್ ಷಾ ವಂದಿಸಿದರು.

