ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಮತ್ತು ನಿಡ್ಡೋಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಂಗಳೂರು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದ್ದು, ನ. 6 ರಂದು ಬೆಳಿಗ್ಗೆ 9 ಗಂಟೆಗೆ ನಿಡ್ಡೋಡಿ ಪೇಟೆಯ ಬಾಕಿಮಾರು ಗದ್ದೆಯಲ್ಲಿ ಉದ್ಘಾಟನೆಗೊಳ್ಳಲಿದೆ ಹಾಗೂ ತಿಂಗಳ ಪ್ರತಿ ಭಾನುವಾರದಂದು ಆಯೋಜಿಸಲಾಗಿದೆ ಎಂದು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ನಿಡ್ಡೋಡಿ ಎಸ್.ಎನ್. ಪಬ್ಲಿಕ್ ಸ್ಕೂಲಿನ ಅಧ್ಯಕ್ಷ ಯದುನಾರಾಯಣ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಯುವಕರಲ್ಲಿ ಕ್ರೀಡಾ ಆಸಕ್ತಿಯನ್ನು ಅರಳಿಸುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 1 ಲಕ್ಷದ 1ರೂ. ಹಾಗೂ ವಿವೇಕ ಟ್ರೋಫಿ, ದ್ವಿತೀಯ ಬಹುಮಾನ 50 ಸಾವಿರದ 5 ರೂ. ಹಾಗೂ ವಿವೇಕ ಟ್ರೋಫಿ, ತೃತೀಯ ಬಹುಮಾನ 30 ಸಾವಿರದ 3 ರೂ. ಹಾಗೂ ವಿವೇಕ ಟ್ರೋಫಿ, ನಾಲ್ಕನೇ ಬಹುಮಾನ 20 ಸಾವಿರದ 2 ರೂ.ಹಾಗೂ ವಿವೇಕ ಟ್ರೋಫಿ ನೀಡಿ ಗೌರವಿಸಲಾಗುವುದು.
ಅಲ್ಲದೆ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ,ಉತ್ತಮ ಎಸೆತಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಭಾಗವಹಿಸುವ ಎಲ್ಲಾ ಆಟಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಎಂದವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ನಿಡ್ಡೋಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಪ್ರಸಾದ್, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಭಾಸ್ಕರ ದೇವಸ್ಯ, ಉದ್ಯಮಿ ಶ್ರೀಧರ ಶೆಟ್ಟಿ ಮಾನಿಲ, ಕಲ್ಲಮುಂಡ್ಕೂರು ವ್ಯ.ಸೇ.ಸ. ಬ್ಯಾಂಕಿನ ಅಧ್ಯಕ್ಷ ವರದರಾಯ ಕಾಮತ್, ನಿಡ್ಡೋಡಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯದರ್ಶಿ ನಾರಾಯಣ ಪ್ರಭು, ಕಲ್ಲಮುಂಡ್ಕೂರು ಬಿಲ್ಲವರ ಸಂಘದ ಅಧ್ಯಕ್ಷ ಕೆ.ಗಂಗಾಧರ, ತಾಲೂಕು ಪಂಚಾಯತ್ ಸದಸ್ಯ ಸುಕುಮಾರ ಸನಿಲ್, ನಿಡ್ಡೋಡಿ ಬಿಲ್ಲವರ ಸಂಘದ ಅಧ್ಯಕ್ಷ ಜಯ ಪೂಜಾರಿ, ಕಲ್ಲಮುಂಡ್ಕೂರು ಗ್ರಾ.ಪಂ. ಉಪಾಧ್ಯಕ್ಷ ಸುಂದರ ಪೂಜಾರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸೀತಾರಾಮ ಶೆಟ್ಟಿ ಮತ್ತು ಸದಾನಂದ ನಾರಾವಿ ಸುದ್ದಿಗೋಷ್ಠಿಯಲ್ಲಿದ್ದಾರೆ.

