ಬಂಟ್ವಾಳ: ಹಿಂದು ಮುಸ್ಲಿಂರ ನಡುವೆ ಸಹೋದರತ್ವವನ್ನು ಮೂಡಿಸಲು ಮಹಾತ್ಮ ಗಾಂಧೀಜಿ ಅವಿರತ ಶ್ರಮ ಪಟ್ಟವರು. ರಾಷ್ಟ್ರೀಯ ಚಳುವಳಿ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಜನತೆಯಲ್ಲಿ ಮೂಡಿಸಿದವರು ಎಂದು ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಜಾರಾಮ ತೋಳ್ಪಾಡಿ ಹೇಳಿದರು.
ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಲ್ಲಿ ದ.ಕ. ಜಿಲ್ಲಾ ಅಂಬೇಡ್ಕರ್, ನೆಹರು ಅಧ್ಯಯನ ಕಮ್ಮಟ್ಟದ ಆಶ್ರಯದಲ್ಲಿ ನಡೆದ ಗಾಂಧಿ ಜಯಂತಿಯ ಅಂಗವಾಗಿ ನಡೆದ ಗಾಂಧಿ ಚಿಂತನೆಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ದ.ಆಫ್ರಿಕಾದಲ್ಲಿ ಇದ್ದ ವೇಳೆ ಅಲ್ಲಿನ ವರ್ಣ ಭೇದ ನೀತಿಯ ವಿರುದ್ದ ಮಹಾತ್ಮ ಗಾಂಧಿಜಿ ಹೋರಾಟ ಮಾಡಿದ್ದರು, ಅಲ್ಲಿಯೇ ಅವರು ಸತ್ಯಾಗ್ರಹ ನಡೆಸುವ ಬಗ್ಗೆ ತರಬೇತಿಯನ್ನು ಪಡೆದಿದ್ದರು ಎಂದು ತಿಳಿಸಿದರು. ಸ್ವಾರ್ಥದಿಂದಾಗಿಯೇ ಸಮಸ್ಯೆ ಉದ್ಭವಿಸುವುದು, ಸ್ವಾರ್ಥ ಆಧುನೀಕರಣದ ಪರಿಣಾಮವೇ ಆಗಿದೆ ಎಂದ ಅವರು ಪಾಶ್ವತ್ಯರಿಂದ ಬಂದಂತಹ ಗ್ರಾಹಕ ಸಂಸ್ಕøತಿಯನ್ನು ವಿರೋಧಿಸಬೇಕು ಎಂದು ಗಾಂಧೀಜಿ ಬಯಸಿದ್ದರು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಅಂಬೇಡ್ಕರ್ ಕಮ್ಮಟದ ಸಂಚಾಲಕ ಲುಕ್ಮಾನ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು, ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಗಾಂಧೀಜಿ, ನೆಹರು, ಅಂಬೇಡ್ಕರ್ ನಿಮಲ್ಲಿಯೇ ಹುಟ್ಟಿ ಬರಲು ಸಾಧ್ಯವಿದೆ. ಸಮಾಜದ ಸಮಸ್ಯೆಗಳಿಗೆ ಇಂತಹ ಮಹಾನ್ ಪುರುಷರ ತತ್ವ ಸಿದ್ದಾಂತಗಳೆ ಉತ್ತರವಾಗಲಿದೆ ಎಂದರು. ಮಂಗಳೂರು ವಿ.ವಿ. ಸೆನೆಟ್ ಸದಸ್ಯ, ಜಿಲ್ಲಾ ಅಂಬೇಡ್ಕರ್ ಕಮ್ಮಟದ ಅಧ್ಯಕ್ಷ ಪಿ.ಎ. ಮೋಹನ್ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯೇ ಜಯಶ್ರಿ ಪಿ. ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಪಿ.ಪಿ. ಜೋಸೆಫ್, ನೂತನ ಪ್ರಾಚಾರ್ಯ ಮಾರಿಯೆಟ್ ಮಸ್ಕರೇನಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪನ್ಯಾಸಕರಾದ ಜೆ.ಪಿ.ಎಂ. ಚೆರಿಯನ್ ಸ್ವಾಗತಿಸಿದರು, ಸರಳದೇವಿ ವಂದಿಸಿದರು, ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

