ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಕೃಷಿ ಇಲಾಖೆ ವತಿಯಿಂದ ನಿರ್ಮಾಣಗೊಂಡ ರೂ 38ಲಕ್ಷ ವೆಚ್ಚದ ‘ರೈತ ಸಂಪರ್ಕ ಕೇಂದ್ರ’ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಸಂಜೆ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತಿತರರು ಇದ್ದಾರೆ.

ದೇಶದಲ್ಲಿ ಆಹಾರ ಪೂರೈಕೆ ಮತ್ತು ಆರ್ಥಿಕತೆಯಲ್ಲಿ ಗಣನೀಯ ಪ್ರಭಾವ ಹೊಂದಿರುವ ಕೃಷಿ ಚಟುವಟಿಕೆ ಮತ್ತು ತೋಟಗಾರಿಕಾ ಬೆಳೆಯನ್ನು ಲಾಭದಾಯಕವಾಗಿ ಪರಿವರ್ತಿಸುವಲ್ಲಿ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಪೂರಕವಾಗಿದೆ. ಇದಕ್ಕಾಗಿ ಪ್ರತೀ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ಅನಿವಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಕೃಷಿ ಇಲಾಖೆ ವತಿಯಿಂದ ನಿರ್ಮಾಣಗೊಂಡ ರೂ 38ಲಕ್ಷ ವೆಚ್ಚದ ‘ರೈತ ಸಂಪರ್ಕ ಕೇಂದ್ರ’ ಕಟ್ಟಡವನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಿಶ್ರಬೆಳೆ ಕೃಷಿಕರಿಗೆ ಲಾಭದಾಯಕವಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಜಿಲ್ಲಾ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಕೆ.ಪದ್ಮನಾಭ ರೈ, ಬಂಟ್ವಾಳ ಕೃಷಿಕ ಸಮಾಜ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರು ಮತ್ತಿತರರು ಶುಭ ಹಾರೈಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆಂಪೇಗೌಡ, ಉಪ ಕೃಷಿ ನಿರ್ದೇಶಕ ಡಾ.ಆರ್.ಮುನೇಗೌಡ ಮತ್ತಿತರರು ಇದ್ದರು. ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಮತ್ತು ಮಣ್ಣು ಪರೀಕ್ಷಾ ದೃಢಪತ್ರ ವಿತರಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂದ ಪ್ರಾಸ್ತಾವಿಕ ಮಾತನಾಡಿ, ಬಂಟ್ವಾಳ ಹೋಬಳಿ ಮಾತ್ರವಲ್ಲದೆ ಪಾಣೆಮಂಗಳೂರು ಮತ್ತು ವಿಟ್ಲ ಹೋಬಳಿಯಲ್ಲಿ ಕೂಡಾ ರೈತ ಸಂಪರ್ಕ ಕೇಂದ್ರದ ಅಗತ್ಯತೆ ಇದೆ ಎಂದರು. ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ನಂದನ್ ಶೆಣೈ ವಂದಿಸಿದರು. ಹಿರಿಯ ಶಿಕ್ಷಕ ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು.
