ಸುಳ್ಯ ತಾಲೂಕಿನ ವಳಲಂಬೆಯಲ್ಲಿರುವ ಶ್ರೀಕರುವಜೆ ಕೇಶವ ಜೋಯಿಸ-ಶ್ರೀಮತಿ ವಿಜಯಲಕ್ಷ್ಮೀ ದಂಪತಿಗೆ ಈ ವರ್ಷ[21ನೇ ವರ್ಷ]ದ ಉಂಡೆಮನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ವೃತ್ತಿಯಲ್ಲಿ ಕೃಷಿಕ-ವೈದಿಕರಾಗಿರುವ ಶ್ರೀಯುತ ಜೋಯಿಸರು ಪುಟಪರ್ತಿ, ಶೃಂಗೇರಿ,ಕುಂಭಕೋಣಂ,ಚಿತ್ತೂರು ಮುಂತಾದೆಡೆಗಳಲ್ಲಿ ಶಿಕ್ಷಣವನ್ನು ಪಡೆದು ಕೃಷ್ಣಯಜುರ್ವೇದೀಯ ಪದ್ಧತಿಯಲ್ಲಿ ಪೂರ್ವ-ಅಪರ ಪ್ರಯೋಗಗಳಲ್ಲಿ ನಿಷ್ಣಾತರಾಗಿರುತ್ತಾರೆ.ಅವಿಭಜಿತ ದ.ಕ.ಜಿಲ್ಲೆ,ಕಾಸರಗೊಡು ಜಿಲ್ಲೆಗಳ ವಳಲಂಬೆ, ಸುಬ್ರಹ್ಮಣ್ಯ,ಕಾಂಚೋಡು,ಅರಂಬೂರು, ಸುಳ್ಯ,ಬೆಳ್ಳಾರೆ,ಕಾಟುಕುಕ್ಕೆ,ಮಧೂರು ಮತ್ತು ಬೆಂಗಳೂರಿನ ಮರುತ್ತಳ್ಳಿ ಸೇರಿದಂತೆ ಹಲವೆಡೆಗಳಲ್ಲಿ ವೇದಪಾಠಶಾಲೆ-ವಸಂತ ವೇದಪಾಠಶಾಲೆಗಳನ್ನು ಪ್ರಾರಂಭಿಸಿ, ಆರಂಭಿಸಲು ಪ್ರೇರಣೆ ನೀಡಿದ ಇವರು ಮನೆ-ಮನೆಗಳಿಗೆ ತೆರಳಿ ಆಸಕ್ತ ವೇದ ವಿದ್ಯಾರ್ಥಿಗಳನ್ನು ಕಲೆಹಾಕಿ ವೇದಕಲಿಸುತ್ತಿರುವ ನಿಜಾರ್ಥದಲ್ಲಿ ವೇದಶಿಕ್ಷಕರಾಗಿದ್ದಾರೆ.ನಾಡಿನೆಲ್ಲಡೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ವೇದ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ ಇವರ ಮೂವರು ಮಗಂದಿರೂ ವೇದ-ಜೌತಿಷಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದವರಾಗಿರುತ್ತಾರೆ.ಇವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ನಾಟಿ ವೈದ್ಯೆಯಾಗಿದ್ದು ಸಂತಾನ ಭಾಗ್ಯ ಹೊಂದಿರದ ಅರುವತ್ತಕ್ಕೂ ಮಿಕ್ಕ ದಂಪತಿಗಳಿಗೆ ಸಂತಾನ ಪಡೆಯುವಲ್ಲಿ ಔಷಧ ನೀಡಿ ಯಶಸ್ವಿಯಾಗಿರುತ್ತಾರೆ.ಇವರ ಹಿರಿಯ ಮಗ ಶಿವ ಸುಬ್ರಹ್ಮಣ್ಯ ಶರ್ಮಾ ಇವರು ಅಂಧತ್ವ ಬಂದಿದ್ದ ಹುಡುಗನೋರ್ವನಿಗೆ ವೇದ-ಪಾರಂಪರಿಕ ಪದ್ಧತಿಯಲ್ಲಿ ದೃಷ್ಟಿಯೊದಗಿಸಿರುವುದನ್ನು ನಾವಿಲ್ಲಿ ನೆನಪಿಸಬಹುದು. ಇವೆಲ್ಲವನ್ನೂ ಪಾರಂಪರಿಕ ಸೇವಾ ದೃಷ್ಟಿಯಿಂದ ಮಾಡುತ್ತಿರುವ ಈ ದಂಪತಿ ಮತ್ತು ಕುಟುಂಬದ ಸಾಧನೆಗಳನ್ನು ಗಮನಿಸಿ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ನೀಡಲಾಗುವುದೆಂದು “ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ”Éಯ ಸಂಚಾಲಕ ಯು.ಎಸ್.ವಿಶ್ವೇಶ್ವರ ಭಟ್ ತಿಳಿಸಿದ್ದಾರೆ.ಇದೇ ತಿಂಗಳ 14ರಂದು ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

